ಕಾರ್ಕಳ: ಕರ್ನಾಟಕ ವಿಧಾನಸಭೆಯ ಕಲಾಪದ ಸಂದರ್ಭದಲ್ಲಿ ಉಪ ಸಭಾಪತಿ ಮೇಲೆ ಕಾಗದ ಪತ್ರವನ್ನು ಎಸೆದು ಅಸಭ್ಯ ವರ್ತನೆ ತೋರಿದ ಕಾರಣ ಅಮಾನತು ಶಿಕ್ಷೆಗೆ ಒಳಗಾದ ಕಾರ್ಕಳ ಶಾಸಕ ಸುನೀಲ್ ಕುಮಾರವರ ವರ್ತನೆಯಿಂದ ಕ್ಷೇತ್ರದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಹಾಗೂ ಪುರಸಭಾ ಸದಸ್ಯ ಶುಭದರಾವ್ ಹೇಳಿದ್ದಾರೆ.
ಕಾರ್ಕಳದಲ್ಲಿ ಅನೇಕ ಮಹನೀಯರು ಕ್ಷೇತದ ಶಾಸಕರಾಗಿ ಸೇವೆ ಸಲ್ಲಿಸಿ ಕಾರ್ಕಳಕ್ಕೆ ಕೀರ್ತಿ ತಂದಿದ್ದಾರೆ. ರಾಜ್ಯದ ವಿವಿದ ಇಲಾಖೆಗಳ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸರಕಾರದ ಸಚಿವರಾಗಿ ಸುದೀರ್ಘವಾಗಿ ಅಧಿಕಾರ ನಡೆಸಿದರೂ ಯಾರು ಕೂಡ ಇಂತಹ ವರ್ತನೆ ತೋರಿ ಅಮಾನತು ಶಿಕ್ಷೆಗೆ ಒಳಗಾಗಲಿಲ್ಲ, ಬದಲಿಗೆ ತಮ್ಮ ಕಾರ್ಯವೈಖರಿಯಿಂದ ಕ್ಷೇತ್ರದ ಗೌರವವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಿದ್ದಾರೆ ಆದರೆ ಶಾಸಕ ಸುನೀಲ್ ಕುಮಾರ್ ವರ್ತನೆಯಿಂದ ಕ್ಷೇತ್ರದ ಜನರಿಗೆ ಮಾಡಿದ ಅವಮಾನವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯದ ಕೋಟ್ಯಾಂತರ ಜನರ ಬದುಕಿಗೆ ಮತ್ತು ರಾಜ್ಯದ ಒಟ್ಟು ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಜಾರಿಯಾಗುತ್ತದೆ, ಅದೊಂದು ದೇವಾಲಯವಿದ್ದಂತೆ, ಇಲ್ಲಿ ಯಾವುದೇ ದೊಡ್ಡ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಹಾಗಿರುವಾಗ ಸಣ್ಣಪುಟ್ಟ ಕಾರಣಕ್ಕಾಗಿ ಈ ರೀತಿಯ ವರ್ತನೆ ನಿಜಕ್ಕೂ ಬೇಸರದ ಸಂಗತಿ, ಶಾಸಕರು ತಮ್ಮ ಹಳೇ ಚಾಳಿಯನ್ನು ಬಿಟ್ಟರೆ ಕ್ಷೇತ್ರದ ಗೌರವ ಕಾಪಾಡಿದಂತಾಗುತ್ತದೆ ಎಂದು ಶುಭದ ರಾವ್ ತಿಳಿಸಿದ್ದಾರೆ