ಮಂಗಳೂರು: ರಾಜ್ಯದಲ್ಲಿ ಆನ್ಲೈನ್ ಗೇಮ್, ಆನ್ಲೈನ್ ಬೆಟ್ಟಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ನಗರದ ಜಿಲ್ಲಾ ಪಂಚಾಯತ್ನಲ್ಲಿ ಮಂಗಳವಾರ ದ.ಕ. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆನ್ಲೈನ್ ಗೇಮ್, ಬೆಟ್ಟಿಂಗ್ನಿAದಾಗಿ ಸಮಾಜ ಹಾಳಾಗುತ್ತಿದ್ದು, ಇವೆಲ್ಲವುಗಳನ್ನು ಬ್ಯಾನ್ ಮಾಡುವ ಚಿಂತನೆ ಇದೆ ಎಂದ ಅವರು, ಸೈಬರ್ ಕ್ರೈಮ್ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಡಬೇಕು ಎಂದು ನಿರ್ದೇಶನ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತು ಹಾವಳಿ ವಿಪರೀತ ಹೆಚ್ಚಿದೆ. ಡ್ರಗ್ಸ್ ಪೆಡ್ಲರ್ಗಳು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಗೂಂಡಾ ಕಾಯ್ದೆ ದಾಖಲಿಸಿ, ಕೆಲವರನ್ನು ಗಡೀಪಾರು ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ಸಿದ್ದರಾಮಯ್ಯ ತಾಕೀತು ಮಾಡಿದರು.
ಡ್ರಗ್ಸ್ ಹಾವಳಿ ಮಟ್ಟ ಹಾಕದಿದ್ದರೆ ಸಮಾಜ ಹಾಳಾಗುತ್ತದೆ. ಇದರ ವಿರುದ್ಧ ಕಟ್ಟುನಿಟ್ಟು ಕ್ರಮ ಜಾರಿಗೊಳಿಸುವ ಜತೆಗೆ ಸಾರ್ವಜನಿಕ ಜಾಗದಲ್ಲಿ ಸಾರ್ವಜನಿಕರು ಡ್ರಗ್ಸ್ ಕುರಿತು ಮಾಹಿತಿ ನೀಡಲು ಅನುಕೂಲವಾಗುವಂತೆ ಸಲಹಾ ಬಾಕ್ಸ್ ಇಡುವಂತೆಯೂ ಸೂಚಿಸಿದರು. ನೈತಿಕ ಪೊಲೀಸ್ಗಿರಿ ಯಾರೇ ಮಾಡಲಿ, ಗಂಭೀರ ಕ್ರಮ ಕೈಗೊಳ್ಳಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯ ನಿರ್ದೇಶನ ನೀಡಿದರು.