Share this news

ಕಾರ್ಕಳ: ರಾಜ್ಯದಲ್ಲಿ ಸರಕಾರ ಬದಲಾದರೂ ತಾಲೂಕಿನಾದ್ಯಂತ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಿಯಮಬಾಹಿರ ಗಣಿಗಾರಿಕೆ ನಡೆಯುತ್ತಿದೆ, ಇದನ್ನು ತಕ್ಷಣವೇ ನಿಲ್ಲಿಸದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಎಚ್ಚರಿಸಿದ್ದಾರೆ.

ತಾಲೂಕಿನಾದ್ಯಂತ ಕಾನೂನಿನಂತೆ ಪರವಾನಿಗೆ ಪಡೆದು ಗಣಿಗಾರಿಕೆ‌‌ ನಡೆಸುವವರು ಕೆಲವು ಜನ ಮಾತ್ರ, ಆದರೆ ಯಾವುದೇ ಪರವಾನಿಗೆ ಇಲ್ಲದೇ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಇದನ್ನು‌ ತಕ್ಷಣ ನಿಲ್ಲಿಸಬೇಕು‌‌ ಈ ಬಗ್ಗೆ ಸಚಿವರ ಗಮನಕ್ಕೂ ತರಲಾಗಿದೆ.
ಡೀಮ್ಡ್ ಅರಣ್ಯ, ಗೋಮಾಳ ಹಾಗೂ ಸರಕಾರಿ ಜಾಗದಲ್ಲಿ ಗಣಿ ಲೂಟಿಯಾಗುತ್ತಿದೆ ಇದರಲ್ಲಿ ಸ್ವತಃ‌ ಅಧಿಕಾರಿಗಳು ಶಾಮೀಲಾಗಿ ಸಹಕಾರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ತಾಲೂಕಿನ ಬೆಳ್ಮಣ್, ಸೂಡಾ, ನಿಟ್ಟೆ, ಗುಂಡ್ಯಡ್ಕ, ರೆಂಜಾಳ ಮುಂತಾದ ಕಡೆಗಳಲ್ಲಿ ಗಣಿ ಲೂಟಿಯಾಗುತ್ತಿದ್ದು ಸರಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೇ ವ್ಯವಹಾರ ನಡೆಯುತ್ತಿದೆ. ಸಮುದ್ರಕ್ಕೆ ಕಲ್ಲು ಹಾಕುವ ನೆಪದಲ್ಲಿ ನಂದಳಿಕೆ, ಬೆಳ್ಮಣ್ಣು ಭಾಗ ಲೂಟಿಯಾಗಿದೆ ಇಲ್ಲಿ‌ಯೂ ಗಣಿ ಅಧಿಕಾರಿಗಳು ರಾಜ ಧನವನ್ನು ಸಂಗ್ರಹಿಸದೇ ಸರಕಾರಕ್ಕೆ ದ್ರೋಹ ಎಸಗುತ್ತಿದ್ದು, ಗಣಿ ಲೂಟಿಕೋರರ ಜತೆ ಶಾಮೀಲಾಗಿ ತಮ್ಮ ಜೇಬು ತುಂಬಿಸಿಕೊಳ್ಳುತಿದ್ದಾರೆ ಎಂದು ಆರೋಪಿಸಿದ್ದಾರೆ.

ಡೀಮ್ಡ್ ಅರಣ್ಯ ಮತ್ತು ಗೋಮಾಳದಲ್ಲಿ ಮನೆ ಕಟ್ಟಿ ಕುಳಿತವರಿಗೆ ಹಕ್ಕು ಪತ್ರ ನೀಡಲು‌ ಆಕ್ಷೇಪಿಸುವ ಈ ಅಧಿಕಾರಿಗಳು, ಗಣಿ ಲೂಟಿಗೆ ಅವಕಾಶ ಕಲ್ಪಿಸಿರುವುದು ಖೇದಕರ ತಕ್ಷಣ ಈ ಅಕ್ರಮ ಲೂಟಿಯನ್ನು ಸಂಬಂಧಿಸಿದ ಅಧಿಕಾರಿಗಳು ತಡೆಗಟ್ಟಬೇಕು ಇಲ್ಲವಾದರೆ ಮುಂದೆ ಎದುರಾಗುವ ಸಮಸ್ಯೆಗೆ ಅಧಿಕಾರಿಗಳೇ ನೇರ ಹೊಣೆಯಾಗಬೇಕಾದೀತು ಎಂದು ಶುಭದ ರಾವ್ ಎಚ್ಚರಿಸಿದ್ದಾರೆ

Leave a Reply

Your email address will not be published. Required fields are marked *