ಮೂಲ್ಕಿ: ಕಳೆದ 9 ದಿನಗಳಿಂದ ನಾಪತ್ತೆಯಾದ್ದ ವ್ಯಕ್ತಿಯೊಬ್ಬರು ಪಾವಂಜೆ ಬಳಿಯ ರಾಷ್ಟ್ರೀಯ ಹೆದ್ದಾರಿ 66 ಪಕ್ಕದ ಪಾಳುಬಿದ್ದ ಮನೆಯಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿ ಮುಲ್ಕಿಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಗ್ರಾಮದ ಪಾವಂಜೆ ಕದ್ರಾತೋಟ ನಿವಾಸಿ ದೇವದಾಸ್ ಕುಲಾಲ್ (52) ಎಂದು ಗುರುತಿಸಲಾಗಿದೆ.
ಕಳೆದ ಜುಲೈ 25ರಂದು ಕದ್ರಾ ತೋಟದ ತನ್ನ ಮನೆಯಿಂದ ಕೆಲಸಕ್ಕೆಂದು ಹೋಗಿದ್ದ ದೇವದಾಸ್ ಕುಲಾಲ್ ನಿಗೂಢವಾಗಿ ನಾಪತ್ತೆಯಾಗಿದ್ದರು. ಗುರುವಾರ ಪಾವಂಜೆ ಪರಿಸರದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಕಂಡು ಸ್ಥಳೀಯರು ಅನುಮಾನಾಸ್ಪದವಾಗಿ ಹುಡುಕಾಡಿದಾಗ ಪಾಳುಬಿದ್ದ ಮನೆಯೊಳಗೆ ತೀರಾ ಕೊಳೆತ ಸ್ಥಿತಿಯಲ್ಲಿ ದೇವದಾಸ್ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ಕೀಟನಾಶಕ ಪ್ಯಾಕೆಟ್ ಮತ್ತು ಎರಡು ಪ್ಲಾಸ್ಟಿಕ್ ಬಾಟಲಿಗಳು ಪತ್ತೆಯಾಗಿದ್ದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತರ ಪತ್ನಿ ಮತ್ತು ಸಂಬAಧಿಕರು ದೇವದಾಸ್ ಅವರ ಅಂಗಿ, ಪ್ಯಾಂಟ್ ನಿಂದ ಶವ ಗುರುತಿಸಿದ್ದು, ಮೂಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಾಮಾಜಿಕ ಕಾರ್ಯಕರ್ತರಾದ ಆಸಿಫ್ ಹಾಗು ಅದ್ದಿ ಬೊಳ್ಳೂರು ಇವರುಗಳ ಸಹಾಯದಿಂದ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಮುಲ್ಕಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಯಿತು
ಆತ್ಮಹತ್ಯೆಗೆ ಹಣಕಾಸಿನ ಸಮಸ್ಯೆ ಎಂದು ಶಂಕಿಸಲಾಗಿದ್ದು ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.