ಕುಂದಾಪುರ :ಖ್ಯಾತ ಯಕ್ಷ ಸಾಹಿತಿ,ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ , ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ, 51 ಛಂದೊಬದ್ದ ಉತ್ತಮ ಗುಣಮಟ್ಟದ ಸಾಹಿತ್ಯವನ್ನೊಳಗೊಂಡ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಪಿ. ವಿ. ಆನಂದ ಸಾಲಿಗ್ರಾಮ ಇವರಿಗೆ ಸಾಸ್ತಾನದ ಗೋಳಿಗರಡಿ ಮೇಳದ ವತಿಯಿಂದ ಯಕ್ಷ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಶನಿವಾರ ರಾತ್ರಿ ನಡೆಯಲಿದೆ.
ಇಂದು ಸಾಸ್ತಾನ ಪೇಟೆಯಲ್ಲಿ ರಾತ್ರಿ 9.00ಕ್ಕೆ ನಡೆಯುವ ವರಾಹ ರೂಪಂ ನೂತನ ಯಕ್ಷಗಾನ ಪ್ರಸಂಗ ಬಿಡುಗಡೆಯ ಸಂದರ್ಭದಲ್ಲಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಮೇಳದ ಯಜಮಾನರಾದ ಬಿ. ವಿಠಲ ಪೂಜಾರಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗರಡಿ ಪಾತ್ರಿಗಳಾದ ಜಿ. ಶಂಕರ ಪೂಜಾರಿ, ಐರೋಡಿ ಅನಲಾಡಿ ಮಠದ ರಮೇಶ್ ಕಾರಂತ, ಐರೋಡಿ ಗಣಪಯ್ಯ ಆಚಾರ್ಯ, ಪ್ರಸಂಗಕರ್ತ ಸುರೇಶ್ ಕುಲಾಲ್, ಮೇಳದ ಪ್ರತಿನಿಧಿ ಎ. ಎನ್. ಶಂಕರ ಕುಲಾಲ್, ಮೆನೇಜರ್ ಹರೀಶ್ ಸಾಲಿಯಾನ್ ಉಪಸ್ಥಿತರಿರಲಿದ್ದಾರೆ.
ಬಹುಮುಖ ಪ್ರತಿಭೆಯ ಪಿ.ವಿ ಆನಂದ ಅವರು ಕೇವಲ ಶಿಕ್ಷಣ, ಸಾಹಿತ್ಯ ,ಯಕ್ಷಗಾನ ಕ್ಷೇತ್ರ ಮಾತ್ರವಲ್ಲದೇ ಮಾಧ್ಯಮ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ಗಮನಸೆಳೆಯುತ್ತಿದ್ದಾರೆ.