Share this news

ಉಡುಪಿ: ಇಂದು ಸಮಾಜದಲ್ಲಿ ಸತ್ಯ ಹೇಳುವುದೇ ಸತ್ಯ ಹೇಳುವುದೇ ಬಹಳ ದೊಡ್ಡ ಸವಾಲಿನ ಕೆಲಸವಾಗಿದೆ. ಪತ್ರಕರ್ತರು ಯಾವುದೇ ಒತ್ತಡದ ಸಂದಭದಲ್ಲೂ ಸತ್ಯವನ್ನು ಹೇಳುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು. ಅಂತಹ ವೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತರ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಟಿವಿ9 ಸುದ್ದಿವಾಹಿನಿಯ ಮಾಜಿ ನಿರೂಪಕ ಹಾಗೂ ಸುದ್ದಿಯಾನ ಡಿಜಿಟಲ್ ಮೀಡಿಯಾದ ಪ್ರಧಾನ ಸಂಪಾದಕ ಹರಿಪ್ರಸಾದ್ ಎ. ಹೇಳಿದ್ದಾರೆ.


ಅವರು ಜುಲೈ 1ರಂದು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ, ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಐಎಂಎ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ಈ ವರ್ಷ ಸಾಕಷ್ಟು ಕುಸಿತ ಕಂಡಿದೆ. ಭಾರತದ ಸ್ಥಾನವು 150ರಿಂದ 161ಕ್ಕೆ ಇಳಿಕೆಯಾಗಿದೆ. ನಾವು ಈ ಸೂಚ್ಯಂಕದಲ್ಲಿ ನೆರೆಯ ದೇಶಗಳಿಗಿಂತಲೂ ನಾವು ಸಾಕಷ್ಟು ಹಿಂದುಳಿದ್ದೇವೆ ಎಂದರು.

ಸಮಾಜವನ್ನು ತಿದ್ದುವ ಜವಾಬ್ದಾರಿಯುತ ಪತ್ರಕರ್ತ ಯಾವುದೇ ಸಂದರ್ಭದಲ್ಲೂ ಜಾತಿವಾದಿ, ಕೋಮುವಾದಿ, ಭ್ರಷ್ಟಾಚಾರಿ ಆಗಬಾರದು. ಜಾತಿಯ ಆಧಾರದಲ್ಲಿ ಸುದ್ದಿಯನ್ನು ಮಾಡುವುದು ಮತ್ತು ಬೇರೆ ಧರ್ಮದ ಕಾರಣಕ್ಕೆ ವ್ಯಕ್ತಿಯನ್ನು ಟೀಕೆ ಮಾಡುವುದು ಮಾಧ್ಯಮ ಕ್ಷೇತ್ರಕ್ಕೆ ಮಾಡುವ ಮಹಾದ್ರೋಹ. ಪತ್ರಕರ್ತರ ಭ್ರಷ್ಟಾಚಾರಕ್ಕೆ ಒಳಗಾಗದರೆ ಅಂದೇ ಆತನ ಒಳಗಿರುವ ಪತ್ರಕರ್ತ ವೌನವಾಗುತ್ತಾನೆ ಎಂದರು. ಪತ್ರಿಕಾರಂಗದಲ್ಲಿ ರಾಜಕಾರಣಿಗಳು ಹೂಡಿಕೆ ಮಾಡುತ್ತಿರುವ ಪರಿಣಾಮವಾಗಿ ಆ ಮಾಧ್ಯಮದಲ್ಲಿರುವ ಪತ್ರಕರ್ತ ಆ ಪಕ್ಷದ ಪರವಾದ ಹಾಗೂ ವಿರೋಧ ಪಕ್ಷಗಳ ನೆಗೆಟಿವ್ ವೀವ್ಸ್ ಗಳನ್ನೇ ಹೇಳುತ್ತಾನೆ. ಅಲ್ಲಿ ನ್ಯೂಸ್ ಹೆಸರಿನಲ್ಲಿ ವೀವ್ಸ್ ಕೊಡುವ, ಅಭಿಪ್ರಾಯ ಹೇಳುವ ವ್ಯವಸ್ಥೆ ಬರುತ್ತದೆ ಅದು ನೈಜ ಪತ್ರಿಕೋದ್ಯಮವಾಗಲಾರದು ಎಂದರು. ನಿಜವಾದ ಪತ್ರಕರ್ತರು ಎಲ್ಲ ವಲಯಗಳಲ್ಲಿ ಆಗುವ ಸರಿ ತಪ್ಪುಗಳ ಆವಲೋಕನ ಮಾಡುವ ಮಾನಸಿಕತೆ ಹಾಗೂ ವಿವೇಚನೆಯನ್ನು ಬೆಳೆಸಿ ಕೊಳ್ಳಬೇಕು. ನಮಗೆ ಯಾವುದೇ ಇಸಂ ಇಲ್ಲ. ನಮಗೆ ಇರಬೇಕಾಗಿರುವುದು ಕೇವಲ ಜರ್ನಲಿಂ. ಅದನ್ನು ಸರಿಯಾಗಿ ಅನುಸರಿಸಿದರೆ ನಮಗೆ ಅನೇಕ ವಿಚಾರಗಳನ್ನು ಎದುರಿಸಬಹುದಾಗಿದೆ ಎಂದು ಅವರು ತಿಳಿಸಿದರು.


ಸರಕಾರಗಳು ಹಾಗೂ ಅಧಿಕಾರ ವ್ಯವಸ್ಥೆ ದಾರಿತಪ್ಪಿದಾಗ ವಿಮರ್ಶೆಗೆ ಒಳಪಡಿಸಬೇಕಾಗಿರುವುದು ಪತ್ರಕರ್ತರ ಹಾಗೂ ಮಾಧ್ಯಮದ ಮುಖ್ಯ ಜವಾಬ್ದಾರಿಯಾಗಿದೆ. ಪತ್ರಕರ್ತರು ತೊಂದರೆಗೆ ಒಳಗಾದವರ ಪರವಾಗಿ ನಿಲ್ಲುವುದು ಕೂಡ ಬಹಳ ಮುಖ್ಯ. ಸಮಾಜದ ಕನ್ನಡಿ ಆಗಿರುವ ಮಾಧ್ಯಮ ಕ್ಷೇತ್ರದಲ್ಲಿರುವ ಒತ್ತಡಗಳನ್ನು ನಿಬಾಯಿಸುವುದೇ ಪತ್ರಕರ್ತನ ಮುಂದಿರುವ ದೊಡ್ಡ ಸವಾಲು ಆಗಿದೆ ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಾಧ್ಯಮಗಳು ಆಡಳಿತವರ್ಗಕ್ಕೆ ಕಾಣದ ಸಮಾಜದಲ್ಲಿನ ಅಂಕುಡೊAಕುಗಳ ದೃಷ್ಠಿಕೋನ ಕೊಡುತ್ತವೆ. ಮಾಧ್ಯಮ ಮತ್ತು ಆಡಳಿತವರ್ಗ ಜೊತೆಯಾಗಿ ಕೆಲಸ ಮಾಡಿದರೆ ಸಮಾಜದ ಏಳಿಗೆಗೆ ಶ್ರಮಿಸಲು ಸಾಧ್ಯ ವಾಗುತ್ತದೆ. ಪೆನ್ನಿನಲ್ಲಿ ಇರುವ ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.


ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಕಳದ ಹಿರಿಯ ಪತ್ರಕರ್ತ ರಾಧಾಕೃಷ್ಣ ತೋಡಿಕಾನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ಕರ್ನಾಟಕ ಕಾರ್ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಅರಾಡಿ ಉಪಸ್ಥಿತರಿದ್ದರು.


ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *