ಉಳ್ಳಾಲ : ಸೋಮೇಶ್ವರ ಬೀಚ್ನಲ್ಲಿ ಹಿಂದೂ ಸಹೋದರಿಯರಿಗೆ ಅನ್ಯಾಯವಾದಾಗ ಕಾರ್ಯಕರ್ತರು ಸಂಘರ್ಷದ ಮೂಲಕ ಉತ್ತರವನ್ನು ನೀಡಿದ್ದಾರೆಯೇ ಹೊರತು ಪಲಾಯನವಾದಿಗಳಾಗಿಲ್ಲ. ಉಳ್ಳಾಲ ಕ್ಷೇತ್ರದಲ್ಲಿರುವ ಹಿಂದೂ ವಿರೋಧಿ ಜನಪ್ರತಿನಿಧಿಯ ಕೈಗೊಂಬೆಯಂತೆ ಪೊಲೀಸ್ ಇಲಾಖೆ ವರ್ತಿಸಿದರೆ ಮುಂದಿನ ದಿನಗಳಲ್ಲಿ ಉತ್ತರವನ್ನು ಹಿಂದೂ ಸಮಾಜ ಕೊಡಲು ಸಿದ್ಧವಿದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.
ಕಾಪಿಕಾಡು ಗಟ್ಟಿಸಮಾಜ ಭವನದಲ್ಲಿ ಹಿಂದೂ ಬಾಂಧವರು ಉಳ್ಳಾಲ ನೇತೃತ್ವದಲ್ಲಿ ಜರುಗಿದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕರ್ತರ ವಿರುದ್ಧ ಕೇಸು ಹಾಕಲಾಗಿದೆ. ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ರಕ್ಷಣೆ ನೀಡಲಾಗಿದೆ. ಕೈ ಬಳೆ ಹಾಕಿದ ಸಮಾಜ ನಮ್ಮದಲ್ಲ. ದ್ವೇಷದ ರಾಜಕಾರಣವನ್ನು ಮಾಡದೆ ಪ್ರೀತಿ ವಿಶ್ವಾಸದ ವಾತಾವರಣ ನಿರ್ಮಿಸುವುದು ಇಲ್ಲಿನ ಜನಪ್ರತಿನಿಧಿಯ ಕರ್ತವ್ಯ. ಪೊಲೀಸ್ ಇಲಾಖೆಯೊಳಗೂ ಹಿಂದೂಗಳಿದ್ದೀರಿ, ಜನಸ್ನೇಹಿ ಇಲಾಖೆಯ ಪೊಲೀಸರಿಗೆ ಗೌರವ ಕೊಡುವ ಹೃದಯ ಶ್ರೀಮಂತಿಕೆ ಇರುವ ಸಮಾಜವೆಂದರೆ ಹಿಂದೂ ಸಮಾಜ ಎಂದರು.
ಸೋಮೇಶ್ವರದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಘಟನೆ ನಡೆದಿದೆ. ಹಿಂದೂ ಕಾರ್ಯಕರ್ತರ ಕಣ್ಣೀರು ಕಂಡಿದ್ದೇವೆ. ಅಧಿಕಾರಕ್ಕೋಸ್ಕರ ಹಿಂದೂ ಸಮಾಜವನ್ನು ಯಾವ ರೀತಿ ಬಳಸಬಹುದು. ದೇವದುರ್ಲಭ ಕಾರ್ಯಕರ್ತರ ಮೇಲೆ ಕೇಸು, ಹಲ್ಲೆಯ ಮುಖಾಂತರ ಅಧಿಕಾರವನ್ನು ಕ್ಷೇತ್ರದಲ್ಲಿ ಸ್ಥಾಪಿಸಿರುವುದು ಕಂಡುಬಂದಿದೆ. ಮೋಜು ಮಸ್ತಿಗೆ ಹಿಂದೂ ಸಹೋದರಿಯರನ್ನು ಉಪಯೋಗಿಸುವ ಸಂದರ್ಭದಲ್ಲಿ ಕಾರ್ಯಕರ್ತರು ವಿರೋಧ ಮಾಡಿದ್ದಾರೆ ಎಂದರು.
ಉಳ್ಳಾಲದಲ್ಲಿ ಹಿಂದೂ ವಿರೋಧಿ ವಿಚಾರಗಳು ನಡೆದರೆ, ಹಲ್ಲೆಗಳು ನಡೆದರೆ ಮುಂದೆ ನಿಂತು ನ್ಯಾಯ ಒದಗಿಸುತ್ತೇವೆ. ಸವಾಲುಗಳು, ಸಂಘರ್ಷಗಳು, ಹೋರಾಟಗಳು, ಅಪಮಾನಗಳು ಎಲ್ಲವನ್ನೂ ಸ್ವೀಕಾರ ಮಾಡಿ ಎಂತಹ ಸಂದರ್ಭದಲ್ಲಿಯೂ ಹಿಂದುತ್ವವನ್ನು ಬಿಡುವುದಿಲ್ಲ ಅನ್ನುವ ನಿರ್ಧಾರದೊಂದಿಗೆ ಸಂಘಟಿತರಾಗಿದ್ದೇವೆ ಎಂದು ಹೇಳಿದರು.
ಪುತ್ತಿಲ ಪರಿವಾರದ ಗೌರವ ಸಲಹೆಗಾರ ರಾಜಶೇಖರ್ ಮಾತನಾಡಿ, ಧರ್ಮಕ್ಕೆ ಸರಿಯಾದ ನಾಯಕತ್ವ ಇಲ್ಲದಾಗಿದೆ. ಕೆಲ ವ್ಯಕ್ತಿಗಳ ಲಾಭಕ್ಕಾಗಿ ನಡೆಯುವ ವಿಚಾರವಾಗುತ್ತಿದೆ. ಧರ್ಮ ಉಳಿಯಬೇಕಾದರೆ ಎಲ್ಲರೂ ಒಂದಾಗಬೇಕಿದೆ ಎಂದರು.
ಉದ್ಯಮಿ ಕಿರಣ್ ಧರ್ಮಸ್ಥಳ ದಿಕ್ಸೂಚಿ ಭಾಷಣ ಮಾಡಿದರು. ವಕೀಲ, ನ್ಯಾಷನಲ್ ಹ್ಯೂಮನ್ ರೈಟ್ಸ್ನ ಸದಸ್ಯ ಶಿವಾನಂದ್ ವಿಟ್ಲ, ಹಿಂದೂ ಯುವಸೇನೆಯ ಜಯಂತ್ ಕಾಪಿಕಾಡ್, ಗಟ್ಟಿಸಮಾಜದ ಅಧ್ಯಕ್ಷ ದಯಾನಂದ್ ಪಿಲಿಕೂರು, ಕಾರ್ಯಕ್ರಮದ ಸಂಘಟಕ ಮಿತೇಶ್ ಪೂಜಾರಿ ಉಪಸ್ಥಿತರಿದ್ದರು.