ಬೆಂಗಳೂರು: 4 ದಶಕಗಳ ಕಾಲ ಬಿಜೆಪಿಯಲ್ಲಿದ್ದು ಶಾಸಕ ಸಚಿವ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಬಿಜೆಪಿಯೊಂದಿಗಿನ ತಮ್ಮ ಸಂಬಂಧಕ್ಕೆ ತಿಲಾಂಜಲಿ ನೀಡಿದ್ದು, ಕಾಂಗ್ರೆಸ್ ಸೇರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜಗದೀಶ್ ಶೆಟ್ಟರ್ ಅವರನ್ನು ಪಕ್ಷದ ಕಚೇರಿಯಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಖರ್ಗೆ, ಶೆಟ್ಟರ್ ಅವರು ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಯಾವುದೇ ಶರತ್ತುಗಳಿಲ್ಲದೇ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಶೆಟ್ಟರ್ ಅವರನ್ನು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿಯಲ್ಲಿ ನನಗೆ ಬಹಳ ಬೇಸರವಾಗಿದೆ. ಪಕ್ಷದಲ್ಲಿ ನನನ್ನು ಕಡೆಗಣಿಸಲಾಯಿತು. ಯಡಿಯೂರಪ್ಪ ಅವರ ಬಗ್ಗೆ ನಮಗೆ ಗೌರವವಿದೆ. ಅವರ ಜೊತೆ ಸೇರಿಕೊಂಡು ನಾವು ಪಕ್ಷ ಕಟ್ಟಿ ಬೆಳೆಸಿದ್ದೇವೆ. ಅವರನ್ನು ಚುನಾವಣಾ ರಾಜಕಾರಣದಿಂದ ಹೊರಗೆ ಕಳುಹಿಸಲಾಯಿತು. ವಯಸ್ಸಿನಲ್ಲಿ ನೋಡುವುದಾದರೆ ಅವರ ನಂತರದ ಪಕ್ಷದಲ್ಲಿ ಲಿಂಗಾಯಿತ ಹಿರಿಯ ನಾಯಕ ನಾನೇ ಇದೇ ಕಾರಣಕ್ಕೆ ಕೆಲವರು ಚಿತಾವಣೆ ಮಾಡಿ ನನ್ನನ್ನು ಕಡೆಗಣನೆ ಮಾಡಿದ್ದಾರೆ ಮುಂದೆ ಮುಖ್ಯಮಂತ್ರಿ ಸ್ಥಾನ ಕೇಳಬಹುದು ಎಂಬ ಉದ್ದೇಶದಿಂದಲೇ ಹೀಗೆ ಮಾಡಿದ್ದಾರೆ ಎಂದು ಶೆಟ್ಟರ್ ಅಳಲು ತೊಡಿಕೊಂಡಿದ್ದಾರೆ.
ಇವತ್ತು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಾನು ಎಂಎಲ್ಎ ಚುನಾವಣೆಗೆ ನಿಂತು ಅಲ್ಲಿ 6 ತಿಂಗಳು ಶಾಸಕನಾಗಿರುತ್ತೇನೆ ನಂತರ ನಿಮಗೆ ಬೇಕಾದವರನ್ನೇ ನಿಲ್ಲಿಸಿ ಎಂದು ಕೂಡ ಹೇಳಿದ್ದೆ, ನನಗೆ ಯಾವುದೇ ಅಧಿಕಾರ ಬೇಡ ಎಂದು ಹೇಳಿದ್ದೆ ಆದರೂ ಕೇಳಲಿಲ್ಲ. ನನ್ನನ್ನು ಗೌರವಯುತವಾಗಿ ರಾಜ್ಯದಿಂದ ಹೊರಗಡೆ ಕಳುಹಿಸಿ ಎಂದೇ ಅದನ್ನು ಮಾಡಲಿಲ್ಲ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಿರಿ ಎಂದು ಗೌರವಯುತವಾಗಿ ಹೇಳಿದ್ದರೆ ಒಪ್ಪುತ್ತಿದೆ ಆದರೆ ಕರೆ ಮಾಡಿ ನಿಮಗೆ ಟಿಕೆಟ್ ಇಲ್ಲ ಎಂದರು.
ನಾವೆಲ್ಲಾ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯವೆಂಬುದನ್ನು ಹೇಳಿದವರು ಅದನ್ನೇ ಕೇಳಿ ಬೆಳೆದವರು. ಆದರೆ ಇಂದು ಬಿಜೆಪಿಯಲ್ಲಿ ಕೆಲವು ವ್ಯಕ್ತಿಗಳೇ ಮುಖ್ಯವಾಗುತ್ತಿದ್ದಾರೆ. ತಮ್ಮ ಬೆಳವಣಿಗೆಗಾಗಿ ಇವರು ಪಕ್ಷದ ನೀತಿಯನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಶೆಟ್ಟರ್ ದೂರಿದರು. ಎಲ್ಲಾ ಕಡೆಯ ನಮ್ಮ ಸಮುದಾಯದ ಮುಖಂಡರು ಕರೆ ಮಾಡಿ ಶೆಟ್ಟರೇ ನಿಮಗೇಕೆ ಅನ್ಯಾಯವಾಯಿತು ಎಂದು ನನ್ನನ್ನು ಪ್ರಶ್ನಿಸಿದ್ದರು. ಹುಬ್ಬಳ್ಳಿ ಜನತೆಯ ಪ್ರೀತಿ ವಿಶ್ವಾಸವನ್ನು ನಾನು ಎಂದು ಮರೆಯುವುದಿಲ್ಲ ಅವರಿಂದ ನನಗೆ ಒಂದು ವ್ಯಕ್ತಿತ್ವ ಸಿಕ್ಕಿದೆ ಎಂದು ಶೆಟ್ಟರ್ ಇದೇ ವೇಳೆ ಭಾವುಕರಾದರು.