Share this news

ಮಂಗಳೂರು: ತೆಂಕುತಿಟ್ಟಿನ ಯಕ್ಷಗಾನದ ಭೀಷ್ಮ ಎಂದೇ ಖ್ಯಾತರಾಗಿದ್ದ ಹಿರಿಯ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತ(85) ಇಂದು ವಿಧಿವಶರಾಗಿದ್ದಾರೆ.ಬಲಿಪರ ನಿಧನದಿಂದ ಮೂಲಕ ತೆಂಕು ತಿಟ್ಟು ಯಕ್ಷರಂಗದ ಕೊಂಡಿ ಕಳಚಿದೆ. ಕಂಚಿನ ಕಂಠದ ಗಾಯಕ, ಬಲಿಪ ನಾರಾಯಣ ಭಾಗವತರು ಭಾಗವತಿಕೆಯಲ್ಲಿ ತನ್ನದೇ ಶೈಲಿಯ ಹಾಡುಗಾರಿಕೆಯ ಮೂಲಕ ಆರು ದಶಕಗಳಿಂದ ಯಕ್ಷಪ್ರಿಯರನ್ನು ರಂಜಿಸಿ ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಯಕ್ಷ ಪ್ರಿಯರನ್ನು ತನ್ನ ಭಾಗವತಿಕೆಯ ಮೂಲಕ ಸೆಳೆಯುತ್ತಿದ್ದ ಕಂಚಿನ ಕಂಠವು ಗಾಯನ ನಿಲ್ಲಿಸಿ ಯಕ್ಷಾಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ತಂದೆ ಬಲಿಪ ಮಾಧವ ಭಟ್,ತಾಯಿ ಸರಸ್ವತಿ ಇವರ ಮಗನಾಗಿ 1938ರ ಮಾರ್ಚ್ 13 ರಂದು ಜನಿಸಿದ್ದ ಬಲಿಪರು ಬಡತನದ ನಡುವೆಯೇ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ಯಕ್ಷರಂಗ ಪ್ರವೇಶಿಸಿದ್ದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಉತ್ತಮ ಭಾಗವತರು, ಪ್ರಸಾದ ಬಲಿಪರು ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದು ಕಳೆದ ವರ್ಷ ನಿಧನ ಹೊಂದಿದ್ದರು. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು.ಭಾಗವತಿಕೆಯಲ್ಲಿ ತನ್ನದೇ ಆದ ವಿಶಿಷ್ಟಛಾಪು ಮೂಡಿಸಿ ರಂಗದಿAದ ನಿರ್ಗಮಿಸಿದ ಬಲಿಪ ನಾರಾಯಣ ಭಾಗವತರು ತನ್ನ ಕೊನೆಯ ದಿನಗಳಲ್ಲಿ ಮೂಡುಬಿದಿರೆ ನೂಯಿಯಲ್ಲಿ ವಾಸಿಸುತ್ತಿದ್ದರು.

ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಲಿಪರು ಪಡ್ರೆ ಜಠಾಧಾರಿ ಎಂಬ ಯಕ್ಷಗಾನ ಮೇಳವನ್ನು ಆರಂಭಿಸಿದ್ದರು. ಬಲಿಪರು ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಪದ್ಯಗಳನ್ನು ಕಂಠಪಾಠ ಮಾಡಿ ಯಕ್ಷರಂಗದ ದಿಗ್ಗಜ ಎನಿಸಿಕೊಂಡಿದ್ದರು. ಇವರು 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ತೆಂಕುತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯಲ್ಪಡುತ್ತಿದ್ದ ಬಲಿಪರ ಯಕ್ಷಗಾನದ ಸುದೀರ್ಘ ಸೇವೆಗಾಗಿ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ.ಬಲಿಪ ನಾರಾಯಣ ಭಾಗವತರು ಐದು ದಿನದ ದೇವೀ ಮಹಾತ್ಮೆ ಎಂಬ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.
ತೆಂಕುತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಶೈಲಿಯ ಮೇರು ಭಾಗವತರಾದ ಬಲಿಪ ಭಾಗವತರ ಅಜ್ಜನ ಹೆಸರು ಕೂಡಾ ಬಲಿಪ ನಾರಾಯಣ ಭಾಗವತರೆಂದೇ. ಅವರು ಸ್ವಾತಂತ್ರ‍್ಯ ಪೂರ್ವದಲ್ಲೇ ಯಕ್ಷಗಾನದ ತಾರಾ ವರ್ಚಸ್ಸಿನ ಸುವಿಖ್ಯಾತ ಭಾಗವತರು. ರಂಗದ ಒಳ ಹೊರಗಿನ ವ್ಯವಹಾರ ಮತ್ತು ಜನ್ಮದಾತ ಸಿದ್ಧಿಯಿಂದ ಅಕ್ಷರಶಃ ‘ಹುಲಿ’ಯಂತೆ ಮೆರೆದು ಆ ಕಾಲದ ಕೀರ್ತಿ ಪಡೆದವರು.ಅಂತಹಾ ಅಜ್ಜನ ಹಿನ್ನೆಲೆಯಲ್ಲಿ ಅದೇ ಶೈಲಿಯನ್ನು ಅನುಸರಿಸಿ, ಕೈದಾಟಿಸಿದ ಈಗಿನ ಬಲಿಪ ನಾರಾಯಣ ಭಾಗವತರು ಸುಮಾರು 63ವರ್ಷಗಳಷ್ಟು ಕಾಲ ಸಕ್ರಿಯವಾಗಿ ಯಕ್ಷಗಾನ ಭಾಗವತರಾಗಿ ಯಕ್ಷರಂಗವನ್ನು ಉನ್ನತಿಗೇರಿಸಿ ಇಂದು ಸಹಸ್ರಾರು ಅಭಿಮಾನಿಗಳ ಅಕ್ಷಿಪಟಲದಿಂದ ಕಣ್ಮರೆಯಾಗಿದ್ದಾರೆ. ಬಲಿಪರು ಅನೇಕ ಕಲಾವಿದರನ್ನು ಯಕ್ಷರಂಗಕ್ಕೆ ಕೊಡುಗೆಯಾಗಿ ನೀಡಿದ್ದು ಮಾತ್ರವಲ್ಲದೇ ಸುಮಾರು 70ರಷ್ಟು ಪ್ರಸಂಗಕಾವ್ಯಗಳು ಹಾಗೂ ಪ್ರಸ್ತುತಿಯ ರಂಗನಡೆ-ಮಾಹಿತಿಯನ್ನು ಬಲಿಪರು ಕಂಟಪಾಠ ಮಾಡಿಕೊಂಡಿದ್ದರು ಎನ್ನುವುದು ಗಮನಾರ್ಹ.
ಯಕ್ಷರಂಗದ ಭೀಷ್ಮ ಹಾಗೂ ದಿಗ್ಗಜ ಬಲಿಪ ನಾರಾಯಣ ಭಾಗವತರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ’,ಕವಿ ಮುದ್ದಣ ಪುರಸ್ಕಾರ,ಆಳ್ಸಾಸ್ ನುಡಿಸಿರಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಒಲಿದು ಬಂದಿದ್ದು ಅವರ ಸಾಧನೆಗೆ ಸಂದ ಗೌರವವಾಗಿದೆ.

Leave a Reply

Your email address will not be published. Required fields are marked *