ಬೆಂಗಳೂರು : ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ಬಾಸ್ ಸ್ಪರ್ಧಿಯನ್ನು ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವನ್ಯಜೀವಿಗಳ ಅಂಗಾಂಗಗಳ ಬಳಕೆ ಅಪರಾಧವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆ ಕಾಯಿದೆ ವನ್ಯಜೀವಿ ಸಂರಕ್ಷಣೆಗಾಗಿ ಇದೆ. ವನ್ಯಜೀವಿಗೆ ಸಂಬಂಧಿಸಿದ ವಸ್ತು, ಉತ್ಪನ್ನ ಬಳಕೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ದೂರುಗಳು ಆಧಾರಿಸಿ ನಮ್ಮ ಅಧಿಕಾರಿಗಳು ರೇಡ್ ಮಾಡಿದ್ದಾರೆ ಎಂದರು. ದರ್ಶನ್ ಇರಬಹುದು ಬೇರೆ ಯಾರೇ ಇರಬಹುದು. ದೂರುಗಳ ಬಂದಾಗ ಅದರ ಬಗ್ಗೆ ನ್ಯಾಯ ಸಮ್ಮತವಾಗಿ ತನಿಖೆ ನಡೆಯುತ್ತದೆ. ಒಂದೇ ಮಾನದಂಡದಲ್ಲಿ ಸರ್ಕಾರ ಕಾನೂನು ಕ್ರಮ ಜರುಗಿಸಲಿದೆ. ಕಾನೂನು ಎಲ್ಲರಿಗೂ ಒಂದೇ. ಆದಷ್ಟು ಬೇಗ ಎಫ್ಎಸ್ಎಲ್ ವರದಿ ಕೊಡಬೇಕು ಎಂದು ಹೇಳಿದ್ದೇನೆ. ನಕಲಿ ಉಗುರು ಕೂಡಾ ಹಾಕಿಕೊಳ್ಳಬಾರದು, ಅದರಿಂದ ಬೇರೆಯವರಿಗೆ ಪ್ರಚೋದನೆ ನೀಡಿದಂತೆ ಆಗುತ್ತದೆ. ನಕಲಿ ಹಾಕಿಕೊಂಡವರ ವಿರುದ್ಧ ಕ್ರಮದ ಬಗ್ಗೆ ಕಾಯಿದೆಯಲ್ಲಿ ಇಲ್ಲ. ಆದರೆ ನಕಲಿ ಪೆಂಡೆಂಟ್ ಗಳನ್ನು ಯಾರೂ ಹಾಕಿಕೊಳ್ಳಬಾರದೆಂದು ಮನವಿ ಮಾಡುತ್ತೇನೆ ಎಂದರು.
ಜಗ್ಗೇಶ್ ಕೂಡ ವಿಚಾರಣೆಗೆ ಸಹಕಾರ ನೀಡಿದ್ದಾರೆ. ಆದರೆ ಬಿಗ್ ಬಾಸ್ ಸ್ಪರ್ಧಿ ಸಂತೋಷ್ ವಿಚಾರಣೆಗೆ ಸಹಕಾರ ನೀಡದ್ದಕ್ಕೆ ಬಂಧಿಸಲಾಗಿದೆ. ನಮ್ಮ ಅಧಿಕಾರಿಗಳು ವಿಚಾರಣೆಗೆ ಹೋದಾಗ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಬಂಧಿಸಲಾಗಿದೆ ಎಂದರು.
ವನ್ಯಜೀವಿ ಸಂರಕ್ಷಣಾ ಕಾಯಿದೆ ಬಗ್ಗೆ ಜನರಿಗೂ ಮಾಹಿತಿ ಇಲ್ಲ. ಹೀಗಾಗಿ ಅಪರಾಧವೆಸಗಿದ್ದಾರೆ. ಇಂಥ ಗೊಂದಲ ಆಗಬಾರದು ಎನ್ನುವ ಕಾರಣಕ್ಕೆ ಒಂದು ತಂಡ ರಚನೆ ಮಾಡಿದ್ದೇವೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆ ಕುರಿತು ಸಿಎಂ ಭೇಟಿಯಾಗಿ ಮಾಹಿತಿ ಕೂಡ ನೀಡಿದ್ದೇನೆ. ಸದ್ಯ ಇಲಾಖೆಯಲ್ಲಿ 4000 ಸಿಬ್ಬಂದಿ ಕೊರತೆ ಇದೆ 800 ಜನ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ವನ್ಯಜೀವಿ ಅಂಗಾAಗ ಪರೀಕ್ಷೆಗೊಳಪಡಿಸುವ ಎಫ್ಎಸ್ಎಲ್ ನಮ್ಮ ರಾಜ್ಯದಲ್ಲಿ ಇಲ್ಲ. ಹೀಗಾಗಿ ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೇ ಲ್ಯಾಬ್ ಮಾಡುತ್ತೇವೆ ಎಂದರು.