Share this news

ಕಾರ್ಕಳ: ಶ್ರೀರಾಮಸೇನೆ ಸಂಸ್ಥಾಪಕ ಪ್ರಖರ ಹಿಂದೂವಾದಿ ಪ್ರಮೋದ್ ಮುತಾಲಿಕ್ ಅವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಕಾರ್ಕಳದಿಂದಲೇ ಸ್ಪರ್ಧಿಸುವಂತೆ ಅವರ ಬೆಂಬಲಿಗರು ತೀವೃ ಒತ್ತಡ ಹೇರುತ್ತಿರುವ ಬೆನ್ನಲ್ಲೇ, ಮೂಲಗಳ ಪ್ರಕಾರ ಮುತಾಲಿಕ್ ಅವರ ಸಂಕ್ರಾಂತಿ ದಿನವೇ ಮಹತ್ವದ ಘೋಷಣೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಆ ಮೂಲಕ ಮುತಾಲಿಕ್ ಕಾರ್ಕಳದಲ್ಲಿ `ಸಂ” ಕ್ರಾಂತಿ ಮಾಡಲಿದ್ದಾರೆಯೇ ಎನ್ನುವ ಕುತೂಹಲ ಗರಿಗೆದರಿದೆ.

ಕಳೆದ 4 ತಿಂಗಳಿನಿAದ ಪದೇಪದೇ ಕಾರ್ಕಳಕ್ಕೆ ಭೇಟಿನೀಡಿ ಕಾರ್ಕಳ ಕ್ಷೇತ್ರದಾದ್ಯಂತ ಸಂಚರಿಸಿ ಹಿಂದೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಮುತಾಲಿಕ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, 5 ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದ್ದು ಈ ಪೈಕಿ ಕಾರ್ಕಳವೂ ಒಂದು ಎನ್ನುವ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದರು.ಇದಾದ ಬಳಿಕ ಕಾರ್ಯಕರ್ತರ ಸಮಾವೇಶದಲ್ಲಿ ಹಿಂದುತ್ವದ ಪರವಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧವಾಗಿ ಕಾರ್ಕಳದಿಂದಲೇ ನನ್ನ ಸ್ಪರ್ಧೆ ಎಂದು ಹೇಳಿಕೆ ನೀಡಿದ್ದು ಮಾತ್ರವಲ್ಲದೇ ಬಳಿಕ ತೇರದಾಳ ಕ್ಷೇತ್ರದಲ್ಲಿನ ಸ್ಪರ್ಧೆಯ ವಿಚಾರ ತೇಲಿಬಿಟ್ಟಿದ್ದರು.

ಇದಾದ ಬಳಿಕ ಮುತಾಲಿಕ್ ಕಾರ್ಕಳ ಭೇಟಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದ ಹಿನ್ನಲೆಯಲ್ಲಿ ಇತ್ತ ಕಾರ್ಯಕರ್ತರಲ್ಲಿ ಮೊದಲಿನ ಉತ್ಸಾಹ ಹುರುಪು ಕಡಿಮಯಾಗಿತ್ತು, ಈ ಬೆನ್ನಲ್ಲೇ ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುತ್ತಿಲ್ಲ ಎನ್ನುವ ಸುದ್ದಿಗಳು ಹರಿದಾಡಿದ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಭ್ರಮನಿರಸನಗೊಂಡಿದ್ದರು. ಇತ್ತ ಮುತಾಲಿಕ್ ಕಾರ್ಕಳದಿಂದ ಸ್ಪರ್ಧಿಸುವುದು ಅನುಮಾನ ಎಂಬ ಸುದ್ದಿಯಿಂದ ಬಿಜೆಪಿ ಮಾತ್ರ ಫುಲ್ ರಿಲ್ಯಾಕ್ಸ್ ಆದಂತಿದೆ.

ಆದರೆ ಪ್ರಮೋದ್ ಮುತಾಲಿಕ್ ಬಣದ ಆಪ್ತರು ಹೇಳೋದೇ ಬೇರೆ. ಮುತಾಲಿಕ್ ಕಾರ್ಕಳದಿಂದಲೇ ಸ್ಪರ್ಧಿಸುತ್ತಾರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಅವರು ಗೆಲ್ಲುವುದು ಶತಃಸಿದ್ದ, ಆದರೆ ಮುತಾಲಿಕ್ ಹಣ ಪಡೆದು ಸ್ಪರ್ಧೆಯಿಂದ ಹಿಂದೆಸರಿಯುತ್ತಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ, ಇದಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎನ್ನುವ ಬೆಂಬಲಿಗರ ಮಾತುಗಳು ಮುತಾಲಿಕ್ ಸ್ಪರ್ಧೆಗೆ ಇಂಬು ನೀಡುವಂತಿದೆ. ಇತ್ತ ಕಾಂಗ್ರೆಸ್ ಪಕ್ಷದ ನಾಯಕರು ಈ ಬೆಳವಣಿಗೆಯನ್ನು ಸೂಕ್ಷö್ಮವಾಗಿ ಗಮನಿಸುತ್ತಿದ್ದು ಸಧ್ಯ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಮುತಾಲಿಕ್ ಸ್ಪರ್ಧೆ ಖಚಿತವಾದರೆ ಕಾರ್ಕಳದಲ್ಲಿ, ಬಿಜೆಪಿ ಕಾಂಗ್ರೆಸ್ ಹಾಗೂ ಮುತಾಲಿಕ್ ಬಣದ ತ್ರಿಕೋನ ಸ್ಪರ್ಧೆ ಏರ್ಪಟ್ಟು ಚುನಾವಣಾ ರಣಕಣ ರಂಗು ಪಡೆಯಲಿದೆ.

Leave a Reply

Your email address will not be published. Required fields are marked *