ಕಾರ್ಕಳ : ಸುಂದರ ಮತ್ತು ಸ್ವಸ್ಥ ಬದುಕಿಗಾಗಿ ನಾವು ಇಂದು ವಿಪರೀತ ಮಾನಸಿಕ ಒತ್ತಡದ ನಡುವೆ ಬದುಕುತ್ತಿದ್ದೇವೆ. ಪರೀಕ್ಷೆಗಳ ಕಾರಣ ನಾವು ಮಾನಸಿಕ ಸಮತೋಲನ ಕಳೆದುಕೊಂಡು ಉದ್ವಿಗ್ನ ಸ್ಥಿತಿಗೆ ತಲುಪಿದ್ದೇವೆ. ಬದುಕನ್ನು ಬದಲಿಸುವುದು ಮತ್ತು ನಮ್ಮನ್ನು ಉನ್ನತಿಗೆ ಕರೆದೊಯ್ಯುವುದು ಸ್ಪರ್ಧಾತ್ಮಕ ಪರೀಕ್ಷೆಗಳೇ ಆದರೂ ನಾವೆಲ್ಲ ಸಮತೋಲಿತ, ಸಕಾರಾತ್ಮಕ ಚಿಂತನೆಗಳನ್ನು ನಡೆಸಬೇಕಾಗಿದೆ. ಹಲವು ಒತ್ತಡಗಳ ನಡುವೆ ಸಮಚಿತ್ತವಾಗಿ ವ್ಯವಹರಿಸುವುದನ್ನು ಕಲಿಯಬೇಕಾಗಿದೆ. ಅತಿಯಾದ ಒತ್ತಡ ಅನೇಕ ಅವಘಡಗಳನ್ನು ಉಂಟುಮಾಡಿದ ಉದಾಹರಣೆಗಳಿವೆ. ಆದ್ದರಿಂದ ಸರಿಯಾದ ದಿಕ್ಕಿನಲ್ಲಿ, ಧನಾತ್ಮಕ ಅಂಶಗಳನ್ನು ಪ್ರಚೋದಿಸಿ ಒತ್ತಡದಿಂದ ಮುಕ್ತವಾಗಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಅಂತರಾಷ್ಟ್ರೀಯ JC ತರಬೇತುದಾರರಾದ ತನುಜಾ ಮಾಬೆನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಕಾರ್ಕಳದ ಕ್ರಿಯೇಟಿವ್ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷೆ ಒತ್ತಡ ನಿವಾರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಗುರಿಯ ಕಡೆಗೆ ಸಾಗುವಾಗ ಅನೇಕ ಅಡ್ಡಿ – ತಡೆಗಳು ಸಾಮಾನ್ಯ. ಅದನ್ನು ಎದುರಿಸುವ ಮನ:ಸ್ಥಿತಿ, ದೃಢ ನಿರ್ಧಾರ ನಮ್ಮದಾಗಿ, ಒತ್ತಡ ನಿವಾರಣೆಯಾದಾಗ ನಮ್ಮ ಗುರಿ ಸಾಧನೆಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಆದರ್ಶ ಎಂ. ಕೆ. ಹಾಗೂ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
























