ಕಾರ್ಕಳ : ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಆಸಕ್ತ ರೈತರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2023-24ನೇ ಸಾಲಿನ ವಿವಿಧ ಯೋಜನೆಗಳಡಿ ರೈತರಿಗೆ ಕಾಳಮೆಣಸು, ಗೇರು, ಜಾಯಿಕಾಯಿ, ಅನಾನಸ್ಸು, ಅಂಗಾAಶ ಬಾಳೆ ಹಾಗೂ ಕಂದು ಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬೂಟಾನ್, ಮ್ಯಾಂಗೋಸ್ಟೀನ್ ಮತ್ತು ಡ್ರ್ಯಾಗನ್ ಫ್ರೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ ಲಭ್ಯವಿದೆ. ಸಣ್ಣ ಸಸ್ಯಾಗಾರಗಳ/ ನರ್ಸರಿಗಳ ಸ್ಥಾಪನೆಗೆ ಶೇ. 50 ರ ದರದಲ್ಲಿ (ಗರಿಷ್ಠ ರೂ. 7.50 ಲಕ್ಷಗಳು) ಸಹಾಯಧನ, ಅಂಗಾAಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ (ಗರಿಷ್ಠ ರೂ. 100.00 ಲಕ್ಷಗಳು) ಸಹಾಯಧನ, ನೀರು ಸಂಗ್ರಹಣ ಘಟಕ (20*20*3 ಮೀ ಅಳತೆ) ನಿರ್ಮಾಣಕ್ಕೆ ಗರಿಷ್ಠ 0.75 ಲಕ್ಷ ರೂಪಾಯಿಗಳ ಸಹಾಯಧನ ಲಭ್ಯವಿದೆ. ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಶೇ. 30 ರಿಂದ ಶೇ. 75 ರ ಸಹಾಯಧನವಿದೆ. ಅಡಿಕೆ ತೋಟ ಹೊಂದಿರುವ ರೈತರಿಗೆ ಅಡಿಕೆ ಸಂರಕ್ಷಣೆ/ ಒಣಗಿಸಲು ಸೋಲಾರ್ ಶೀಟ್ ಖರೀದಿಗೆ ಶೇ. 40 ರ ಸಹಾಯಧನ ಲಭ್ಯವಿದೆ.

ವಿವಿಧ ಜಾತಿಯ ಅಣಬೆ ಉತ್ಪಾದನೆಗಾಗಿ ಅಣಬೆ ಉತ್ಪಾದನಾ ಘಟಕ, ಸ್ಪಾನ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಶೇ. 40 ರ ಗರಿಷ್ಠ ರೂ. 8.00 ಲಕ್ಷಗಳ ಸಹಾಯಧನ ಲಭ್ಯವಿದೆ. ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ವಿವಿಧ ಸಂಸ್ಥೆಗಳು ಸ್ಥಾಪಿಸುವ ಗ್ರಾಮೀಣ ಮಾರುಕಟ್ಟೆ/ರೈತ ಸಂತೆ/ನೇರ ಮಾರುಕಟ್ಟೆ ಸ್ಥಾಪಿಸಲು ಶೇ. 40 ರ ಗರಿಷ್ಠ ರೂ. 10.00 ಲಕ್ಷಗಳ ಸಾಲ ಆಧಾರಿತ ಸಹಾಯಧನ ನೀಡಲು ಅವಕಾಶವಿರುತ್ತದೆ.

ತೋಟಗಾರಿಕೆ ಬೆಳಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 40 ರ ದರದಲ್ಲಿ (ಗರಿಷ್ಠ 10.00 ಲಕ್ಷಗಳ ವರೆಗೆ) ಸಹಾಯಧನ ಲಭ್ಯವಿದೆ. ಪ್ಯಾಕ್ ಹೌಸ್ಗಳ ನಿರ್ಮಾಣಕ್ಕೆ ಗರಿಷ್ಠ 2.00 ಲಕ್ಷಗಳ ವರೆಗೆ ಶೇ. 50 ರ ಸಹಾಯಧನ ಲಭ್ಯವಿದೆ. ರೈತರ ಯಾಂತ್ರೀಕರಣ ಅವಶ್ಯಕತೆಗೆ 20 hಠಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಗೆ ರೂ. 0.75 ದಿಂದ 1.0 ಲಕ್ಷದವರೆಗೆ ರ ಸಹಾಯಧನ ಲಭ್ಯವಿದೆ.

ಹಳೆ ತೆಂಗು ತೋಟಗಳಲ್ಲಿ ಶೇ. 10 ರಷ್ಟು ಹಳೆ ಮರಗಳನ್ನು ತೆಗೆದು ಹೊಸ ಗಿಡಗಳ ನಾಟಿ, ಬುಡ ಮಾಡಿ ಗೊಬ್ಬರ ಕೊಡುವುದು, ಸಸ್ಯ ಸಂರಕ್ಷಣೆ ಹಾಗೂ ನೀರಿನ ಸಂರಕ್ಷಣೆ ಕಾರ್ಯಕ್ರಮಗಳನ್ನು ಕೈಗೊಂಡು ಪುನಶ್ಚೇತನಗೊಳಿಸಲು, ಪ್ರಾತ್ಯಕ್ಷತೆ ತಾಕುಗಳ ನಿರ್ಮಾಣಕ್ಕಾಗಿ ಹಾಗೂ ತೆಂಗು ಬೆಳೆಗೆ ತಗಲುವ ರೋಗ ಮತ್ತು ಕೀಟಗಳ ನಿಯಂತ್ರಣಕ್ಕಾಗಿ ಕೀಟ ಮತ್ತು ರೋಗಗಳಿಗನುಗುಣವಾಗಿ ಒಟ್ಟು ಘಟಕ ವೆಚ್ಚದ ಶೇ. 50 ರಂತೆ ಸಹಾಯಧನ ಲಭ್ಯವಿದೆ. ಹೊಸ ತೆಂಗು ತೋಟ ಮಾಡಲಿಚ್ಛಿಸುವ ರೈತರಿಗೆ ಸಹಾಯಧನ ಸಿಗಲಿದೆ. ಕೃಷಿ ಯಾಂತ್ರೀಕರಣ ಉಪ ಅಭಿಯಾನ ಹಾಗೂ ರಾಷ್ಟೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ. 40/50 ರ ಸಹಾಯಧನವು ಲಭ್ಯವಿದೆ. ಹಾಗೂ ದೊಡ್ಡ ಗಾತ್ರದ ನೀರು ಸಂಗ್ರಹಣಾ ಘಟಕ, ಪ್ಯಾಕಿಂಗ್ ಮತ್ತು ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ ಮತ್ತು ಲಘು ಪೋಷಕಾಂಶಗಳ ಖರೀದಿಗೆ ಸಹಾಯಧನ ಸಿಗಲಿದೆ.

ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ/ತುಂತುರು ನೀರಾವರಿ ಅಳವಡಿಕೆಗೆ ಪ.ಜಾತಿ ಮತ್ತು ಪ.ಪಂಗಡ ರೈತರಿಗೆ ಶೇ. 90 ರಷ್ಟು ಹಾಗೂ ಇತರೇ ವರ್ಗದ ರೈತರಿಗೆ ಶೇ. 75 ರಷ್ಟು ಸಹಾಯಧನ ಲಭ್ಯವಿದೆ. ಸಹಾಯಧನಕ್ಕೆ ಕಛೇರಿಯಲ್ಲಿ ಅರ್ಜಿ ಸಲ್ಲಿಸಿ ಕಾರ್ಯಾದೇಶ ಪಡೆದು ಇಲಾಖೆಯಿಂದ ಅನುಮೋದಿತ ಡೀಲರ್ ಗಳ ಮೂಲಕ ರೈತರು ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಬಹುದಾಗಿದೆ.

ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಯೋಜನೆಯಡಿ ಹೊಸದಾಗಿ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಬಹುದಾಗಿದೆ. ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ತರಬೇತಿಯೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 4 ಪೆಟ್ಟಿಗೆ ಖರೀದಿಗೆ ಶೇ. 75 ರಿಂದ 90 ರ ಸಹಾಯಧನ ಲಭ್ಯವಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ, ಹಳೆ ತೋಟಗಳ ಪುನಶ್ಚೇತನ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿರುತ್ತದೆ. ಈ ಯೋಜನೆಯ ಪ್ರಯೊಜನ ಪಡೆಯಲಿಚ್ಛಿಸುವವರು ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಎಲ್ಲಾ ಯೋಜನೆಗಳಿಗೆ ಪ್ರಯೋಜನೆ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳುವುದು. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಕಾರ್ಕಳ ತೋಟಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.

