ಕಾರ್ಕಳ : ಆಧುನಿಕತೆಯ ಭರಾಟೆಯಲ್ಲಿ ನಾವುಗಳು ಇಂದು ಜೀವನಕ್ಕೆ ಬೇಕಾಗುವ ತಯಾರಿಗಳನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಪರೀಕ್ಷೆ ಬರುವಾಗಲಷ್ಟೇ ತಯಾರಿ ನಡೆಯುತ್ತದೆ. ಉಳಿದ ಸಮಯದಲ್ಲಿ ಕೇವಲ ಇತರ ವ್ಯಸನಗಳಲ್ಲಿ ಕಳೆಯುತ್ತೇವೆ. ನಮಗೆ ಸಿದ್ಧತೆಯ ಪರಿಕಲ್ಪನೆ ಕಡಿಮೆಯಾಗುತ್ತಿದೆ. ಹಾಗಾಗಿ ಮನದಲ್ಲಿ ಆತಂಕ, ಕಳವಳಗಳು ಸೇರಿಕೊಳ್ಳುತ್ತವೆ. ಮುಂದೆ ಅದು ಜಾಸ್ತಿಯಾದರೆ ಮಾನಸಿಕವಾಗಿ ಕುಗ್ಗಿಹೋಗುತ್ತೇವೆ. ಒಮ್ಮೆ ಧೈರ್ಯ ಕಳಕೊಂಡರೆ ಮತ್ತೆ ಪುನಃ ತಂದುಕೊಳ್ಳುವುದು ಕಷ್ಟವಾಗುತ್ತದೆ. ನಡೆ ಮುಂದೆ ನಡೆ ಮುಂದೆ ಜಗ್ಗದೆಯೆ ಕುಗ್ಗುದಯೆ ಹಿಗ್ಗಿ ನಡೆಮುಂದೆ ಎಂಬ ಕುವೆಂಪುರವರ ಮಾತನ್ನು ಮನದಲ್ಲಿ ಸದಾ ಮಾಹಿತಿರೂಪದಲ್ಲಿ ಬದುಕಿಗಾಗಿ ಇಟ್ಟುಕೊಳ್ಳಬೇಕೆಂದು ಕನ್ನಡದ ಖ್ಯಾತ ಬರಹಗಾರ್ತಿ, ಮನೋತಜ್ಞೆ ಮಣಿಪಾಲದ ಶ್ರೀಮತಿ ಜ್ಯೋತಿ ಮಹಾದೇವ್ ಹೇಳಿದರು.
ಅವರು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಸಾಹಿತ್ಯ ಸಂಘದ ವಾರದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಬದುಕು- ಅಡೆತಡೆಗಳು ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ವಿದ್ಯಾರ್ಥಿ ಉಪನ್ಯಾಸಕರಾಗಿ ಭಾಗವಹಿದ್ದ ದ್ವಿತೀಯ ಬಿ.ಎ. ಯ ಅಜಿತ್ಲಾಲ್ ಅವರು ಕೃಷಿ ಮತ್ತು ಆರ್ಥಿಕತೆ ಎಂಬ ವಿಚಾರವಾಗಿ ಪ್ರಬುದ್ಧ ಉಪನ್ಯಾಸವನ್ನು ನೀಡಿದರು. ವಾರದ ಭಾವಗಾನವನ್ನು ರಕ್ಷನ್ ಪ್ರಥಮ ಬಿ.ಕಾಂ. ಅವರು ಪ್ರಸ್ತುತ ಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ.ಕೋಟ್ಯಾನ್ ಅವರು ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಸಾಂದರ್ಭಿಕವಾಗಿ ಮಾತನಾಡಿದರು. ಸಾಹಿತ್ಯ ಸಂಘದ ಸಂಚಾಲಕ ಡಾ. ಅರುಣಕುಮಾರ್ ಎಸ್. ಆರ್ ಹಾಗೂ ಕಾರ್ಯದರ್ಶಿಗಳಾದ ಶ್ರೀನಿಧಿ ಶೆಟ್ಟಿ, ಸೌರಭ್ ಶೆಣೈ, ಪ್ರಮೋದಿನಿ ಹಾಗೂ ದಿಯಾ ಉಪಸ್ಥಿತರಿದ್ದರು.
ಪ್ರೀತಿಕಾ ದ್ವಿತೀಯ ಬಿ.ಎಸ್ಸಿ ಸ್ವಾಗತಿಸಿ, ಖುಷಿ, ದ್ವಿತೀಯ ಬಿಎಸ್ಸಿ ವಂದಿಸಿದರು. ಭೂಮಿಕಾ ದ್ವಿತೀಯ ಬಿ.ಎಸ್ಸಿ ಕಾರ್ಯಕ್ರಮ ನಿರೂಪಿಸಿದರು.