ಕಾರ್ಕಳ : ಮಾನವ ಸುಸಂಗತವಾಗಿ ಜೀವನ ಮಾಡಬೇಕಾದರೆ ತನ್ನ ಬದುಕಿನಲ್ಲಿ ಕಲೆ, ವಿಜ್ಞಾನ ಮುಂತಾದುವುಗಳ ಬಗ್ಗೆ ಗಮನ ಹರಿಸುವುದು ಮಾತ್ರವಲ್ಲ ತನ್ನ ವಿದ್ಯೆಯ ಜೊತೆಗೆ ಅವುಗಳಲ್ಲಿ ತೊಡಗಿಸುವಂತಾದರೆ ಉತ್ತಮ. ಯಾಕೆಂದರೆ ನಮ್ಮ ಬಾಳಿನ ಶಿಲ್ಪಿಗಳು ನಾವೇ. ನಾವೆಲ್ಲವನ್ನು ಸರಿದೂಗಿಸಿಕೊಂಡು ಹೋದಾಗ ತುಂಬು ವ್ಯಕ್ತಿತ್ವ ನಮ್ಮದಾಗುತ್ತದೆ. ಮತ್ತು ಸಮಾಜಕ್ಕೆ ಬೇಕಾದವರಾಗುತ್ತೇವೆ ಎಂದು ಕಾರ್ಕಳದ ಖ್ಯಾತ ವಾಸ್ತುತಜ್ಞ ಜೇಸೀ ಪ್ರಮಲ್ ಹೇಳಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರ ತಂಜಾವೂರು, ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ ಹಾಗೂ ನಮ್ಮ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಯುವ ಸಬಲೀಕರಣ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್. ಎ. ಕೋಟ್ಯಾನ್ ಅವರು ವಹಿಸಿ ಮಾತನಾಡಿ, ಕಲಾವಿದರಾಗುವುದು ಸಣ್ಣ ವಿಷಯವಲ್ಲ. ತಮ್ಮೆಲ್ಲ ವಿದ್ಯಾಭ್ಯಾಸದ ಒತ್ತಡದೊಂದಿಗೆ ಕಲೆಯನ್ನೂ ನಿಭಾಯಿಸುವುದು ಮನಸ್ಸಿನ ಸಮತೋಲನತೆಗೆ ಕಾರಣವಾಗುತ್ತದೆ. ಯಾವುದೇ ಸಂದರ್ಭದಲ್ಲೂ ಧೃತಿಗೆಡದೆ ಮುನ್ನುಗ್ಗುವ ಛಾತಿ ಬರುತ್ತದೆ. ಇಂದು ಇಂದಿನ ಕಾಲದಲ್ಲಿ ಅತೀ ಅಗತ್ಯ ಎಂದರು.
ನಮ್ಮ ತುಳುವೆರ್ ಕಲಾ ಸಂಘಟನೆಯ ನಿರ್ದೇಶಕ ಸುಕುಮಾರ ಮುದ್ರಾಡಿ ಉಪಸ್ಥಿತರಿದ್ದರು.
ಸಮಾರAಭದಲ್ಲಿ ಉಪಸ್ಥಿತರಿದ್ದ ತಂಜಾವೂರಿನ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದ ಆಡಳಿತಾಧಿಕಾರಿ ಶ್ರೀನಿವಾಸ ಐಯ್ಯರ್ ಸ್ವಾಗತಿಸಿದರು.
ತಂಜಾವೂರಿನ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರದ ಅಧಿಕಾರಿ ಆರ್. ಎ. ರವೀಂದ್ರನ್ ವಂದಿಸಿದರು. ಜಗದೀಶ್ ಜಾಲ ಕಾರ್ಯಕ್ರಮ ನಿರೂಪಿಸಿದರು.