ಹಾಸನ: ಸಣ್ಣ ಖಾಸಗಿ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ರಾಜ್ಯ ಸರ್ಕಾರದ ಮುಂದಿಲ್ಲವೆಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಹಾಸನದಲ್ಲಿ ಶನಿವಾರ ಈ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲೂ ಕೆಲವು ಬಡವರು ಸಣ್ಣ ಕಾರು ಇಟ್ಟುಕೊಂಡಿರುತ್ತಾರೆ. ಇದು ನಮ್ಮ ಗಮನಕ್ಕೂ ಬಂದಿದೆ. ಕಾರು ಇಟ್ಟುಕೊಂಡವರ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಳಿಸಬೇಕೇ ಬೇಡವೇ ಎಂಬ ಕುರಿತು ಚರ್ಚೆ ನಡೆಯುತ್ತಿದೆ, ಸಧ್ಯಕ್ಕೆ ಕಾರು ಇದ್ದವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲ್ಲ. ಕಾರು ಇದ್ದೂ ಅರ್ಹತೆ ಇದ್ದಲ್ಲಿ ಬಿಪಿಎಲ್ ಕಾರ್ಡ್ ನೀಡುವ ಕುರಿತು ಪರಿಶೀಲಿಸಲಾಗುವುದು. ಈವರೆಗೆ ನಾವು ಯಾರ ಬಿಪಿಎಲ್ ಕಾರ್ಡ್ ಅನ್ನೂ ರದ್ದು ಮಾಡಿಲ್ಲ. ಕೆಲವರ ಕಾರ್ಡ್ ರದ್ದು ಮಾಡಬೇಕೆನ್ನುವುದು ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರವಾಗಿತ್ತು ಎಂದು ಸಚಿವ ಮುನಿಯಪ್ಪ ಆರೋಪಿಸಿದ್ದಾರೆ.
ಯಾರು ಬಿಪಿಎಲ್, ಯಾರು ಎಪಿಎಲ್ ವ್ಯಾಪ್ತಿಗೆ ಬರುತ್ತಾರೆ ಎಂಬುವುದನ್ನು ನೋಡಿಕೊಂಡು ಅವರಿಗೆ ಸೂಕ್ತ ಕಾರ್ಡ್ ನೀಡಲಾಗುವುದು. ಪರಿಷ್ಕರಣೆ ನಂತರವಷ್ಟೇ ನಾವು ಸ್ಪಷ್ಟ ತೀರ್ಮಾನಕ್ಕೆ ಬರುತ್ತೇವೆ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ತೊಂದರೆ ಆಗಲ್ಲ. ಸದ್ಯಕ್ಕೆ ಯಾವುದೇ ಕಾರ್ಡ್ ರದ್ದು ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇದೆ. ಈಗಾಗಲೇ ಅರ್ಜಿ ಹಾಕಿರುವವರಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡುತ್ತೇವೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಕೊಡುತ್ತೇವೆ ಎಂದು ನಾವು ಹೇಳಿದ್ದೇವೆ. ಅಕ್ಕಿಗಾಗಿ ಆಂಧ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಹೋಗಿ ಬಂದಿದ್ದೇನೆ. ಅಕ್ಕಿಯ ದರದ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ನಾವು ಕೊಟ್ಟಭರವಸೆ ಈಡೇರಿಸುತ್ತೇವೆ ಎಂದರು