ಕಾರ್ಕಳ : ಕಾರ್ಕಳ ಜರಿಗುಡ್ಡೆಯ ಸುರಕ್ಷಾ ಸೇವಾಶ್ರಮದಲ್ಲಿ ಮಾನಸಿಕ ಅಸ್ವಸ್ಥ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.
ಕಸಬಾ ಗ್ರಾಮದ ತೆಳ್ಳಾರು ರಾಘವೇಂದ್ರ ಮಠದ ಬಳಿಯ ನಿವಾಸಿ ಪ್ರೀತಿಕಾ (34 ವರ್ಷ) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪ್ರೀತಿಕಾ ಕಳೆದ ಏಳು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರು, ಉಡುಪಿ ಮತ್ತು ಕಾರ್ಕಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖರಾಗಿರಲಿಲ್ಲ.
ಆಕೆಯನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವುದಕ್ಕಾಗಿ ಡಿಸೆಂಬರ್ 14ರಂದು ಕಾರ್ಕಳ ಜರಿಗುಡ್ಡೆಯಲ್ಲಿರುವ ಸುರಕ್ಷಾ ಆಶ್ರಮಕ್ಕೆ ಸೇರಿಸಲಾಗಿತ್ತು. ಆದರೆ ಮಾನಸಿಕ ಕಾಯಿಲೆ ಉಲ್ಬಣಗೊಂಡ ಕಾರಣ ಆಕೆ ಮನನೊಂದು ಇಂದು ಬೆಳಿಗ್ಗೆ ಆಶ್ರಮದ ಒಳಗಿರುವ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.