ತುಮಕೂರು: ಗೃಹಸಚಿವ ಜಿ.ಪರಮೇಶ್ವರ್ ಅವರಿಗೂ ಸಿಎಂ ಆಗುವ ಅವಕಾಶವಿದೆ. ಪರಮೇಶ್ವರ್ ಈಗ ಹೋಮ್ ಮಿನಿಸ್ಟರ್ ಆಗಿದ್ದಾರೆ. ಮುಂದೆ ಏನು ಬೇಕಾದರೂ ಆಗಬಹುದು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಹೇಳಿದರು.
ತುಮಕೂರಿನಲ್ಲಿ ಪೊಲೀಸ್ ಇಲಾಖೆಯ ಸಮುಚ್ಚಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾಕ್ಟರೇ ನಿಮಗೆ ಅದೃಷ್ಟ ಇದೆ ನಡೆಸುತ್ತೀರಿ ಅಂತ ಹಿಂದೊಮ್ಮೆ ಹೇಳಿದ್ದೆ, ಯಾಕೆಂದರೆ ಅವರಿಗೂ ಅದೃಷ್ಟ ಇದೆ ಅಂತಾ ನಾನು ಭಾವಿಸಿದ್ದೇನೆ. ನಮ್ಮ ಜಿಲ್ಲೆಯಿಂದ ಒಬ್ಬ ಮುಖ್ಯಮಂತ್ರಿ ಆಗ್ತಾರೆ ಅಂದರೆ ನಾವೆಲ್ಲಾ ಸಂತೋಷ ಪಡುತ್ತೇವೆ ನಾವೆಲ್ಲಾ ಮುಖ್ಯಮಂತ್ರಿ ಆದಂತೆ ಭಾವಿಸುತ್ತೇನೆ ಎಂದು ಹೇಳಿದರು. ಸಿದ್ದರಾಮಯ್ಯ ಸಿಎಂ ಆಗಿರುವವರೆಗೆ ನಾವೆಲ್ಲಾ ಸಿದ್ದರಾಮಯ್ಯ ಪರ. ನಾವು, ಪರಮೇಶ್ವರ್ ಇಬ್ಬರೂ ಅವರ ಪರವಿರುತ್ತೇವೆ. ಸಿದ್ದರಾಮಯ್ಯ ಹೊರತುಪಡಿಸಿದರೆ, ಪರಮೇಶ್ವರ್ ಸಿಎಂ ಆಗಬೇಕು ಅಂತ ಬಯಸುತ್ತೇವೆ ಎಂದರು.

ಈಗಾಗಲೇ ಹೈಕಮಾಂಡ್ ನವರು ಏನು ಮಾತನಾಡಬಾರದು ಅಂತ ಸೂಚಿಸಿದ್ದಾರೆ, ನಾನು ಪರಮೇಶ್ವರ್ ಒಟ್ಟಿಗೆ ಸಭೆಯಲ್ಲಿ ಕಾಣಿಸಿಕೊಂಡು ತುಂಬಾ ದಿನವಾಗಿತ್ತು. ಹಾಗಾಗಿ ನನ್ನ ಮನಸಿನ ಭಾವನೆಯನ್ನು ಹೇಳಿದ್ದೇನೆ ಅಷ್ಟೇ ಎಂದರು.
ನಾನು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ, ಈಗ ಮಾತನಾಡಿದ್ದು ಆಗಿದೆ, ಮುಂದೆ ಮಾತನಾಡಲ್ಲ ಅಂತ ಹೇಳುತ್ತೇವೆ, ನಾನಂತೂ ಮುಂದೆ ಚುನಾವಣೆಗೆ ನಿಲ್ಲೋದಿಲ್ಲ ಎಂದರು. ರಾಜ್ಯದಲ್ಲಿ ಸದ್ಯಕ್ಕೆ ಮಾಧ್ಯಮದವರೇ ವಿರೋಧ ಪಕ್ಷದವರು ಎಂದು ಪತ್ರಕರ್ತರನ್ನು ರಾಜಣ್ಣ ಕುಟುಕಿದರು. ನಾನು ವೇದಿಕೆ ಮೇಲೆ ಹೇಳಿದ್ದೆಲ್ಲ ನೀವು ಕೇಳಿಸಿಕೊಂಡಿದ್ದೀರಲ್ವಾ ಅದಕ್ಕೆ ನಾನು ಬದ್ದ ಎಂದರು. ನಾನು ಜೀವಮಾನದಲ್ಲಿ ಏನೆಲ್ಲಾ ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ಎಲ್ಲಾ ವಿಚಾರದಲ್ಲೂ ನಾನು ಹೇಳಿದ ಯಾವ ವಿಚಾರವು ಅಸತ್ಯವಾಗಿಲ್ಲ ಎಂದರು.





