ಮಂಗಳೂರು: ದ.ಕ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ಐಎ) ತನಿಖೆ ತೀವ್ರಗೊಳಿಸಿದ್ದು, ಇದೀಗ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಒಟ್ಟು ಮೂರು ಮಂದಿ ಆರೋಪಿಗಳ ಪತ್ತೆಗೆ ಬಹುಮಾನ ಸಹಿತ ವಾರಟ್ ಘೋಷಿಸಿದೆ.
ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಆರೋಪಿ ನೌಷದ್(32), ಕೊಡಗು ಸೋಮವಾರಪೇಟೆಯ ಚೌಡ್ಲಿ ನಿವಾಸಿ, ಆರೋಪಿ ಅಬ್ದುಲ್ ನಾಸಿರ್(41), ಸೋಮವಾರಪೇಟೆಯ ಹನಗಲ್ ಕಲಂದಕೂರ್ ನಿವಾಸಿ, ಆರೋಪಿ ಅಬ್ದುಲ್ ರಹಿಮಾನ್(36) ಕುರಿತು ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂ. ಬಹುಮಾನ ಘೋಷಿಸಿದೆ.
ಈ ಆರೋಪಿಗಳು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದು, ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಘಟನೆ ಬಳಿಕ ಎಲ್ಲರೂ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಈಗ ಬಹುಮಾನ ಸಹಿತ ವಾರಂಟ್ ಹೊರಡಿಸಲಾಗಿದೆ. ಕಳೆದ ನವೆಂಬರ್ನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಮುಸ್ತಾಫ್ ಪೈಚಾರ್, ಉಮರ್ ಫಾರೂಕ್, ತುಫೈಲ್, ಅಬೂಬಕ್ಕರ್ ಸಿದ್ದಿಕ್ ಪತ್ತೆಗೆ ಒಟ್ಟು 14 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಈ ಪೈಕಿ ಮಡಿಕೇರಿ ನಿವಾಸಿ ತುಫೈಲ್ ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಒಟ್ಟು ಒಂಭತ್ತು ಮಂದಿ ಆರೋಪಿಗಳು ತಲೆಮರೆಸಿದ್ದಾರೆ.