ಕಾರ್ಕಳ : ಕಾಂಗ್ರೆಸ್ ವಿತರಿಸುತ್ತಿರುವ ಗ್ಯಾರಂಟಿ ಕಾರ್ಡ್ ಬಿಜೆಪಿ ದುರಾಡಳಿತದಿಂದ ನಲುಗಿದ ರಾಜ್ಯದ ಸಂತ್ರಸ್ತ ಸಮಾಜಕ್ಕೆ ಸ್ವಾವಲಂಬಿ ಬದುಕಿನ ಭದ್ರ ಬುನಾದಿಯನ್ನು ಹಾಕಲಿದೆ. ಚುನಾವಣಾ ದಿನಗಳಲ್ಲಿ ಇದಕ್ಕೆ ಜನರು ನೀಡುತ್ತಿರುವ ಉತ್ತಮ ಪ್ರತಿಕ್ರಿಯೆಯನ್ನು ಕಂಡು ಬಿಜೆಪಿ ನಾಯಕರು ಸೋಲಿನ ಭಯದಲ್ಲಿ ಹತಾಶರಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಜೆಟ್ ನಲ್ಲಿ ಸುಮಾರು 3.15 ಲಕ್ಷ ಕೋಟಿ ರೂ.ಗಳಿದ್ದು, ರಾಜ್ಯದಲ್ಲಿ ಯೋಜನೆಗಳಿಗೆ ಬೇಕಿರುವ ಹಣ ಸುಮಾರು 26 ರಿಂದ 30 ಸಾವಿರ ಕೋಟಿ ಮಾತ್ರ. ಬಜೆಟ್ ನಲ್ಲಿ ಭಾವನಾತ್ಮಕ ವಿಚಾರಗಳ ಮೇಲಿನ ಅನಗತ್ಯ ವೆಚ್ಚ ಮತ್ತು 40 ಪರ್ಸೆಂಟ್ ಕಮಿಷನ್ ದಂಧೆಯಿAದ ರಾಜ್ಯದ ಖಜಾನೆಗೆ ನಷ್ಟವಾಗುತ್ತಿದೆ. ಬಜೆಟ್ ನಲ್ಲಿರುವ ಅನಗತ್ಯ ವೆಚ್ಚ ಮತ್ತು ಬಜೆಟ್ ಹಣ ಸೋರಿಕೆಯನ್ನು ನಿಯಂತ್ರಿಸಿದರೆ ಸಹಜವಾಗಿಯೇ ಈ ಉಳಿಕೆ ಹಣದಿಂದ ಇನ್ನೂ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯ. ಭ್ರಷ್ಠಾಚಾರವನ್ನು ಹೊದ್ದು ಮಲಗಿರುವ ಬಿಜೆಪಿ ನಾಯಕರಿಗೆ ಇದು ಅರ್ಥ ಆಗಲು ಸಾಧ್ಯವಿಲ್ಲ ಎಂದು ಅವರು ಕುಟುಕಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯ ಆಹಾರ ಭದ್ರತಾ ಕಾಯ್ದೆಯನ್ನು 2011ರಿಂದ 2013ರ ವರೆಗೆ ಪಾರ್ಲಿಮೆಂಟಿನಲ್ಲಿ ಅಂಗೀಕಾರ ಆಗದಂತೆ ನೋಡಿಕೊಂಡ ಬಿಜೆಪಿಗೆ ಅನ್ನಭಾಗ್ಯ ಯೋಜನೆಯ ಕುರಿತು ಮಾತಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿರುವ ಅವರು ಕಾಂಗ್ರೆಸ್ ಅನ್ನಭಾಗ್ಯದ ಅಕ್ಕಿಯ ಮೇಲೆ ಜಿಎಸ್ಟಿ ಹೇರಿಕೆ ಆಳುವ ಸರಕಾರದ ಅಮಾನುಷ ನಿಲುವಿಗೆ ಸಾಕ್ಷಿಯಾಗಿದೆ ಎಂದರು. ಕಾಂಗ್ರೆಸ್ ಆಡಳಿತಾವಧಿಯ ನರೇಗಾ ಯೋಜನೆಯನ್ನು “ದೇಶ್ ಮರೇಗಾ” ಎಂದು ಟೀಕಿಸಿದವರಿಗೆ ಪ್ರಜಾತಂತ್ರ ವ್ಯವಸ್ಥೆಯೊಳಗಿನ ಮಾನವೀಯ ಮೌಲ್ಯಗಳು ಅರ್ಥ ಆಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ.


