ವಿಜಯಪುರ: ಬಿಜೆಪಿ ಮುಳುಗುತ್ತಿರುವ ಹಡಗಲ್ಲ ಅದು ಈಗಾಗಲೇ ಮುಳುಗಿರುವ ಹಡಗು ಆ ಪಕ್ಷಕ್ಕೆ ಯಾವುದೇ ಭವಿಷ್ಯವಿಲ್ಲ ಹಾಗೂ ಬಿಜೆಪಿ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದರು.
ಅವರು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.ಭ್ರಷ್ಟಾಚಾರದ ಮುಳುಗಿಹೋಗಿದ್ದ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಜನ ತಿರಸ್ಕರಿಸಿದ್ದಾರೆ.
ದುಡ್ಡಿಗಾಗಿ ಬಿಜೆಪಿಯವರು ಏನೂ ಮಾಡಲು ಹೇಸುವುದಿಲ್ಲ ಎನ್ನುವುದು ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಸಾಬೀತಾಗಿದೆ. 40 ಪರ್ಸೆಂಟ್ ಕಮಿಷನ್ ಸರಕಾರವನ್ನು ನಾವು ನೋಡಿದ್ದೇವೆ. ಇಂದಿಗೂ ಕೂಡ ಆ ಪಕ್ಷಕ್ಕೆ ಓರ್ವ ಪ್ರತಿಪಕ್ಷದ ನಾಯಕನನ್ನು ನೇಮಕ ಮಾಡಲು ಆಗಿಲ್ಲ ಇದು ಬಿಜೆಪಿಯ ದುರಂತ ಎಂದು ಲೇವಡಿ ಮಾಡಿದರು.
ಬಹುಷಃ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವುದರಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದೆನಿಸುತ್ತದೆ. ಹೀಗಾಗಿ ಕರ್ನಾಟಕ ಬಿಜೆಪಿ ನಾಯಕರ ಮೇಲಿನ ಸಿಟ್ಟಿನಿಂದಾಗಿ ಪ್ರತಿಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕ ಮಾಡಿಲ್ಲ.ರಾಜ್ಯದಲ್ಲಿ ಬಿಜೆಪಿ ಎಂದಿಗೂ ತಲೆ ಎತ್ತಿ ಮೇಲೆ ಏಳಲಾರದ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.
ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈವರೆಗೆ ಜೆಡಿಎಸ್ ಅನಧಿಕೃತವಾಗಿ ಬಿಜೆಪಿಯ ಬಿ ಟೀಂ ಆಗಿತ್ತು. ಈಗ ಅಧಿಕೃತವಾಗಿ ಬಿ ಟೀಂ ಆಗಿದೆ. ಹೀಗಾಗಿ ಜೆಡಿಎಸ್ ಪರವಾಗಿದ್ದ ಜಾತ್ಯತೀತ ಮತಗಳು ಕಾಂಗ್ರೆಸ್ ಪರವಾಗಿ ಬರಲಿವೆ. ಈಗಾಗಲೇ ದುಸ್ಥಿತಿಯಲ್ಲಿರುವ ಬಿಜೆಪಿಗೆ ಈ ಮೈತ್ರಿಯಿಂದ ದೊಡ್ಡ ಹೊಡೆತ ಬೀಳಲಿದ್ದು, ಅದು ಮತ್ತಷ್ಟು ದುಸ್ಥಿಗೆ ಹೋಗಲಿದೆ ಎಂದರು.




