Share this news

ಬೆಂಗಳೂರು:ಕಾಡುಗೋಡಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವಿದ್ಯುತ್ ಪ್ರವಹಿಸಿ ತಾಯಿ-ಮಗು ಸ್ಥಳದಲ್ಲೇ ಸುಟ್ಟು ಕರಕಲಾದ ಭೀಕರ ದುರ್ಘಟನೆ ಸಂಭವಿಸಿದ ನಂತರ, ವಿದ್ಯುತ್‌ ಅವಘಡ ತಡೆ ಸೇರಿದಂತೆ ಸಾರ್ವಜನಿಕರ ಸುರಕ್ಷತಾ ಕ್ರಮ ಕೈಗೊಳ್ಳಲು ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳಲ್ಲೂ (ಎಸ್ಕಾಂ) ಅಗತ್ಯ ಮಾರ್ಗಸೂಚಿ ರೂಪಿಸಲು ಇಂಧನ ಇಲಾಖೆ ಮುಂದಾಗಿದೆ
ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮನ್ವಯ ಸಮಿತಿ ರಚಿಸಿ ಆದೇಶಿಸಲಾಗಿದೆ.
ಅದಕ್ಕಾಗಿ ಎಸ್ಕಾಂಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಏಕರೂಪ ಕಾರ್ಯಾಚರಣೆ ವಿಧಾನ ಅಳವಡಿಸಲು ಸೂಕ್ತ ಮಾರ್ಗಸೂಚಿ ರೂಪಿಸಬೇಕಿದ್ದು, ಸಮನ್ವಯ ಸಮಿತಿ ರಚಿಸಿ ಅದಕ್ಕೆ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷರಾಗಿರುತ್ತಾರೆ.
ಈ ಸಮಿತಿಯು ಕೂಲಂಕುಷವಾಗಿ ಚರ್ಚಿಸಿ ಅಗತ್ಯ ಮಾರ್ಗಸೂಚಿ ರೂಪಿಸಿ, ಎಸ್ಕಾಂಗಳಲ್ಲಿ ಅದರ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.

ಜತೆಗೆ ವಿದ್ಯುತ್‌ ಅಪಘಾತ ತಡೆಯುವ ಕುರಿತು ಎಲ್ಲಾ ಹಂತದ ಅಧಿಕಾರಿ ಮತ್ತು ನೌಕರರಿಗೆ ತರಬೇತಿ ನೀಡಬೇಕು. ವಿದ್ಯುತ್‌ ಅಪಘಾತಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ವಿದ್ಯುತ್‌ ಪರಿವೀಕ್ಷಣಾ ಇಲಾಖೆ ಅಧಿಕಾರಿಗಳು ಸುರಕ್ಷತಾ ನಿಯಮದಂತೆ ಕಾಲಕಾಲಕ್ಕೆ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಹಾಗೂ ಆ ಕುರಿತ ಸಮಗ್ರ ವರದಿಯನ್ನು ಇಂಧನ ಇಲಾಖೆಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉಪಕೇಂದ್ರದ ನಿರ್ವಾಹಕರು ಯಾವುದೇ ೧೧ ಕೆವಿ ವಿದ್ಯುತ್ ಲೈನ್ ಟ್ರಿಪ್‌ ಆದಾಗ ಸಂಬಂಧಪಟ್ಟ ಶಾಖಾಧಿಕಾರಿ-ಉಪವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ ಮಾರ್ಗವನ್ನು ಪರೀಕ್ಷಿಸಬೇಕು. ಪ್ರತೀ ಎಸ್ಕಾಂಗಳ ಮಟ್ಟದಲ್ಲಿ ಪ್ರತೀ ತಿಂಗಳು ಸುರಕ್ಷತಾ ದಿನ ಆಯೋಜಿಸಬೇಕು ಎಂದು ಸೂಚಿಸಲಾಗಿದೆ.

ಕಾಡುಗೋಡಿಯಲ್ಲಿ ನಡೆದ ವಿದ್ಯುತ್ ಅವಘಡಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಇಂಧನ ಇಲಾಖೆ ತಜ್ಞರ ಸಮಿತಿ ರಚಿಸಿದೆ. ಕೆಪಿಟಿಸಿಎಲ್‌ನ ನಿವೃತ್ತ ನಿರ್ದೇಶಕ ಎಸ್‌. ಸುಮಂತ್‌, ಆರ್‌ಟಿ ಮತ್ತು ಆರ್‌-ಡಿ ಮುಖ್ಯ ಎಂಜಿನಿಯರ್‌ ಬಿ.ವಿ.ಗಿರೀಶ್‌, ಸಿಪಿಆರ್‌ಐನ ಜಂಟಿ ನಿರ್ದೇಶಕ ಪ್ರಭಾಕರ್‌, ಉಪಮುಖ್ಯ ವಿದ್ಯುತ್‌ ಪರಿವೀಕ್ಷಕರು ಜಿ.ರವಿಕುಮಾರ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಎರಡು ವಾರಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಸಮಿತಿಯು ವಿದ್ಯುತ್ ಅಪಘಾತದ ಕುರಿತು ಕೂಲಂಕಶವಾಗಿ ತನಿಖೆ ನಡೆಸಿ, ಘಟನೆಗೆ ನಿಖರ ಕಾರಣ ಕಂಡು ಹಿಡಿಯಬೇಕು. ಆ ರೀತಿಯ ಘಟನೆಗಳು ಮರುಕಳಿಸದ ರೀತಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ಇಂಧನ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ

Leave a Reply

Your email address will not be published. Required fields are marked *