ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಗಾಯಗೊಂಡ ಆಟೋ ಚಾಲಕನಿಗೆ ಇಂದು(ಮಾ.22) ಗುರು ಬೆಳದಿಂಗಳು ಫೌಂಡೇಶನ್ನಿಂದ 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ ಮನೆಯನ್ನು ಹಸ್ತಾಂತರಿಸಲಾಯಿತು.

2022ರ ನವೆಂಬರ್ 19 ರಂದು ಮಂಗಳೂರು ನಗರದ ಗರೋಡಿ ಸಮೀಪದ ರಸ್ತೆಯಲ್ಲಿ ಹೋಗುತ್ತಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು. ಘಟನೆಯಲ್ಲಿ ಗಾಯಗೊಂಡು ಪುರುಷೋತ್ತಮ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ವೇಳೆ ಅವರ ಪುತ್ರಿಯ ಮದುವೆ ನಿಶ್ಚಯವಾಗಿದ್ದರಿಂದ, ಪುರುಷೋತ್ತಮ್ ಮನೆಯ ದುರಸ್ತಿ ಕಾರ್ಯವನ್ನ ಮಾಡಬೇಕೆಂದು ನಿಶ್ಚಯಿಸಿದ್ದರು.
ಆದರೆ ಈ ದುರ್ಘಟನೆ ಬಳಿಕ ಮನೆ ದುರಸ್ತಿಯಾಗದೆ ಕಂಗೆಟ್ಟಿದ್ದರು. ಈ ವಿಷಯ ತಿಳಿದ ಗುರು ಬೆಳದಿಂಗಲು ಫೌಂಡೇಶನ್ ಅವರು ಮನೆ ನವೀಕರಿಸುವ ಭರವಸೆ ನೀಡಿದ್ದರು. ಅದರಂತೆ ಇಂದು ಗುರು ಬೆಳದಿಂಗಲು ಫೌಂಡೇಶನ್ ಕೊಟ್ಟ ಮಾತಿನಂತೆ ಮನೆ ನವೀಕರಣಗೊಳಿಸಿ ಯುಗಾದಿ ಹಬ್ಬದ ಗಿಪ್ಟ್ ನೀಡಿದ್ದಾರೆ. ಇನ್ನು ಮಗಳ ಇ.ಎಸ್.ಐ ಯೋಜನೆಯಿಂದಲೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನ ಕುಟುಂಬ ಭರಿಸಿತ್ತು. ಆದರೆ ಈವರೆಗೂ ಪುರುಷೋತ್ತಮ್ಗೆ ಸರ್ಕಾರದ ಪರಿಹಾರ ಲಭಿಸಿಲ್ಲ. ಸದ್ಯ ಸರ್ಕಾರದ ಪರಿಹಾರಕ್ಕಾಗಿ ಪುರುಷೋತ್ತಮ್ ಕುಟುಂಬ ಕಾಯುತ್ತಿದೆ.