ಕಾರ್ಕಳ : ಮಾ.04 ಹಾಗೂ ಮಾ.05 ರಂದು ನಂದಳಿಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಯನ್.ಬಾಲಚಂದ್ರ ಶೆಟ್ಟಿ ಹೇಳಿದರು.
ಅವರು ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕಾರ್ಕಳ ಪ್ರಕಾಶ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ನಂದಳಿಕೆ ಗ್ರಾಮ ಪಂಚಾಯತ್ ಮತ್ತು ದಾನಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಹಲವಾರು ಅಭಿವೃದ್ದಿ ಕಾಮಗಾರಿಗಳು ನಡೆದಿದೆ. ನೂತನ ಬಯಲು ರಂಗಮAದಿರ, ಬಾಲವನ, ಸುಂದರವಾದ ಗಾರ್ಡನ್ ವ್ಯವಸ್ಥೆಯ ಜೊತೆಯಲ್ಲಿ ಇಂಟರ್ಲಾಕ್ ಅಳವಡಿಕೆಯಂತಹ ಹಲವಾರು ಕಾಮಗಾರಿಗಳು ನಡೆದಿದೆ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಲಕ್ಷ್ಮೀಕಾಂತ್ ಭಟ್ ಮಾತನಾಡಿ, ಶಾಲೆಯಲ್ಲಿ ಈಗಾಗಲೇ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಚಿತ ಬಸ್ಸು ವ್ಯವಸ್ಥೆ ಹಾಗೂ ಯೋಗ, ಕರಾಟೆ, ಯಕ್ಷಗಾನ, ಭರತನಾಟ್ಯ ತರಗತಿಗಳನ್ನು ಆರಂಭಿಸಲಾಗಿದೆ ಎಂದರು.
ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಗಣಪತಿ ಆಚಾರ್ಯ ಮಾತನಾಡಿ ಮಾ.04 ರಂದು ಬೆಳಿಗ್ಗೆ 9 ರಿಂದ ಶತಮಾನೋತ್ಸವ ಪ್ರಯುಕ್ತ ಸಂಭ್ರಮದ ಮೆರವಣಿಗೆ ನಡೆಯಲಿದ್ದು ಬೆಳ್ಮಣ್ ಗ್ರಾ.ಪಂ ಅಧ್ಯಕ್ಷ ಜನಾರ್ದನ್ ತಂತ್ರಿ ಚಾಲನೆಯನ್ನು ನೀಡಲಿದ್ದಾರೆ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ, ಬಳಿಕ ನವೀಕೃತ ಹೂದೋಟ ಉದ್ಘಾಟನೆ, ಬಾಲವನ ಹಾಗೂ ನೆಲಹಾಸು ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.
ಬೆಳಿಗ್ಗೆ 11 ರಿಂದ ಶತಮಾನೋತ್ಸವ ಉದ್ಘಾಟನಾ ಸಮಾರಂಭ ಜರುಗಲಿದ್ದು ನೂತನ ರಂಗಮAಟಪ ಹಾಗೂ ಸಭಾ ಕಾರ್ಯಕ್ರಮವನ್ನು ಸಮಿತಿಯ ಗೌರವಾಧ್ಯಕ್ಷ ಕಾಪಿಕೆರೆ ಶ್ರೀ ಕೃಷ್ಣಧಾಮ ಕೃಷ್ಣ ವೈ.ಶೆಟ್ಟಿ ಉದ್ಘಾಟಿಸಲಿದ್ದು, ನಿಟ್ಟೆ ವಿಶ್ವವಿದ್ಯಾಲಯದ ನಿಯೋಜಿತ ಕುಲಪತಿ ಎಮ್.ಎಸ್.ಮೂಡಿತ್ತಾಯ ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಜೆ 6.30 ಕ್ಕೆ ಜರುಗುವ ಸಮಾರವನ್ನು ನಿವೃತ್ತ ಮುಖ್ಯ ಶಿಕ್ಷಕಿ ಇಂದಿರಾ ಉದ್ಘಾಟಿಸಲಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕುದಿ ವಸಂತ ಶೆಟ್ಟಿ ಪ್ರಧಾನ ಭಾಷಣ ಮಾಡಲಿದ್ದಾರೆ ಹಾಗೂ ಹಲವಾರು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2.30ಕ್ಕೆ ಸುಬ್ರಹ್ಮಣ್ಯ ಬೈಪಡಿತ್ತಾಯ ಮತ್ತು ಬಳಗದಿಂದ ಯಕ್ಷಗಾನ ತಾಳ ಮದ್ದಳೆ, ಸಂಜೆ 6.00 ರಿಂದ ಸ್ಥಳೀಯ ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ,ಕರಾಟೆ, ಹಾಗೂ ಭರತನಾಟ್ಯ ರಾತ್ರಿ 9 ರಿಂದ ಹಳೇ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಣಿಕೋಟೆ ಬಾಗಿಲು ರಚಿಸಿದ ಹರಿಪ್ರಸಾದ್ ನಂದಳಿಕೆ ನಿರ್ದೇಶನದ ನಮ ನಮ್ಮಾತೆಗೆ ನಾಟಕ ಪ್ರದರ್ಶನ ನಡೆಯಲಿದೆ.
ಮಾ.05 ರಂದು 9.30 ಕ್ಕೆ ಹಿರಿಯ ವಿದ್ಯಾರ್ಥಿಗಳ ಚಾವಡಿ ಕಾರ್ಯಕ್ರಮವನ್ನು ದಯಾನಂದ ಕಾಮತ್ ಉದ್ಘಾಟಿಸಲಿದ್ದಾರೆ. ಸಂಜೆ 5.30 ಕ್ಕೆ ಜರುಗುವ ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಉದ್ಘಾಟಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಹಾಸ್ ಹೆಗ್ಡೆ ವಹಿಸಲಿದ್ದು, ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರೀಶ್ ತಂತ್ರಿ ಆಶಿರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಮತ್ತಿತರರು ಭಾಗವಹಿಸಲಿದ್ದಾರೆ.
ಸಾಂಸ್ಕೃತಿ ಕಾರ್ಯಕ್ರಮದ ಅಂಗವಾಗಿ ರಾತ್ರಿ 7.30 ರಿಂದ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಹಾಗೂ ರಾತ್ರಿ 9. ರಿಂದ ಶರತ್ ಶೆಟ್ಟಿ ನೇತೃತ್ವದ, ಹರೀಶ್ ಪಡುಬಿದ್ರೆ ರಚಿಸಿದ, ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದ ಕಿನ್ನಿಗೋಳಿಯ ವಿಜಯ ಕಲಾವಿದರಿಂದ ತೊಟ್ಟಿಲು ನಾಟಕ ಪ್ರದರ್ಶನವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಲಾ ಶಿಕ್ಷಕ ಸದಾನಂದ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ನಂದಳಿಕೆ ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.