ಮೂಡುಬಿದಿರೆ: ನಾವು ಜಗತ್ತಿನಲ್ಲಿ ಅತಿ ಹೆಚ್ಚು ಯುವಜನತೆ ಇರುವ ದೇಶ. ನಮ್ಮ ಇಡೀ ಸಮಾಜದಲ್ಲಿ ಯುವ ಜನರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಆಧುನಿಕ ತಂತ್ರಜ್ಞಾನದ ಜೊತೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಅರಿತು ಮುನ್ನಡೆದರೆ ಎಲ್ಲಾ ಸ್ತರದಲ್ಲೂ ಭಾರತ ಶ್ರೀಮಂತ ದೇಶ ಆಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಮೈಸೂರು ಸಂಸ್ಥಾನದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.

ಅವರು ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಜ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉದ್ಘಾಟನೆಯ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ಸಮಾಜದಲ್ಲಿ ಯುವಜನತೆಯ ಪಾತ್ರ ಏನು ಎಂದು ವಿದ್ಯಾರ್ಥಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಆಗಲು ಕಾರಣ ನಮ್ಮ ನೈಜ ಬದುಕಿನಲ್ಲಿ ನಾವು ರೂಢಿಸಿಕೊಂಡು ಬಂದಿದ್ದ ಕಟ್ಟಳೆಗಳು ಆನ್ಲೈನ್ ಲೋಕದಲ್ಲಿ ಇಲ್ಲ. ತಂತ್ರಜ್ಞಾನದ ಪ್ರಗತಿಯ ಜೊತೆಗೆ ಅದನ್ನು ದುರುಪಯೋಗಗೊಳಿಸದಂತೆ ನೀತಿಯನ್ನು ಜಾರಿಗೊಳಿಸುವ ಅವಶ್ಯಕತೆ ಇದೆ ಎಂದರು.
ನೂತನ ಶಿಕ್ಷಣ ನೀತಿಯ ಕುರಿತು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಾ ನಮ್ಮ ದೇಶದಲ್ಲಿ ನೂತನ ಶಿಕ್ಷಣ ನೀತಿಯ ಅವಶ್ಯಕತೆ ಇದೆ. ವಸಾಹತುಶಾಯಿಯನ್ನು ಎದುರಿಸಿಕೊಂಡು ಬಂದಿದ್ದ ನಮ್ಮ ದೇಶ ತದನಂತರವೂ ನಮ್ಮ ಜ್ಞಾನ ವಸಾಹತುಶಾಹಿಯ ಇತಿಹಾಸಕ್ಕೆ ಮಿತಿಗೊಂಡಿದೆ. ಹಾಗೆಯೇ ನಮ್ಮ ದೇಶದ ಇತಿಹಾಸವೂ ದೆಹಲಿ ಕೇಂದ್ರಿತವಾಗಿದ್ದು ಕರ್ನಾಟಕವನ್ನು ಆಳಿದ್ದ ಅನೇಕ ಅರಸುಮನೆತನದ ಇತಿಹಾಸ ನಮ್ಮಲ್ಲಿರುವ ಅನೇಕರಿಗೆ ತಿಳಿದೇ ಇಲ್ಲ. ನಮ್ಮ ಜ್ಞಾನವನ್ನು ವಿಸ್ತರಿಸಬೇಕಾದರೆ ಹೊಸ ವಿಚಾರಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯ ಅವಶ್ಯಕತೆ ತುಂಬಾ ಇದೆ ಎಂದರು.
ಭಾರತೀಯ ಶಿಕ್ಷಣ ಪದ್ಧತಿ ಹಾಗೂ ವಿದೇಶಿ ಶಿಕ್ಷಣ ಪದ್ಧತಿಗೂ ಇರುವ ವ್ಯತ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಯದುವೀರರು ಉತ್ತರಿಸುತ್ತಾ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ನಮ್ಮ ಸಂಸ್ಕೃತಿ ಪರಂಪರೆಯನ್ನು ನಾವು ಕಲಿಯುತ್ತೇವೆ. ಇದು ನಮ್ಮ ಯಶಸ್ವೀ ಬದುಕಿಗೆ ಪೂರಕವಾಗಿದೆ. ವಿದೇಶಿ ಶಿಕ್ಷಣದಲ್ಲಿ ಒಂದು ಪಠ್ಯವನ್ನು ಅದರಲ್ಲಿ ಇದ್ದ ಹಾಗೆ ಕಲಿಯುವ ಅವಶ್ಯಕತೆ ಬೀಳುವುದಿಲ್ಲ. ಅದನ್ನು ಸೃಜನಾತ್ಮಕ ರೀತಿಯಲ್ಲಿ ವಿಶ್ಲೇಷಿಸಲು ಅವಕಾಶ ಇದೆ. ಹೀಗೆ ಎರಡೂ ಶಿಕ್ಷಣ ಪದ್ಧತಿಗಳಲ್ಲೂ ತನ್ನದೇ ಆದ ಸಾಧಕ ಬಾಧಕಗಳಿವೆ ಎಂದರು.

ಇದೇ ಸಂದರ್ಭದಲ್ಲಿ ನೀಟ್ನಲ್ಲಿ ಸಾಧನೆ ಮಾಡಿ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಪಡೆದ ಸಾಧಕರು, ಜೆಇಇ ಮೂಲಕ ಪ್ರತಿಷ್ಠಿತ ಐಐಟಿ ಸಂಸ್ಥೆಗಳಿಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ್ಯಾಂಕ್ ಒಳಗೆ ಸ್ಥಾನವನ್ನು ಪಡೆದ ಪದವಿಪೂರ್ವ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಟ್ಟು 23 ವಿದ್ಯಾರ್ಥಿಗಳಿಗೆ ಅರಸರು ಸನ್ಮಾನ ಪತ, ನಗದು ನೀಡಿ ಗೌರವಿಸಿದರು.
ಬಳಿಕ ಅರಸು ಮನೆತನಕ್ಕೆ ನೀಡುವ ಗೌರವದಂತೆ ಅರಸರನ್ನು ನವಧಾನ್ಯ, ನವಫಲ, ನವಪುಷ್ಪ, ನವಭಕ್ಷ್ಯ, ಮಹಾವೀರ ಸ್ವಾಮಿಯ ಸ್ಮರಣಿಕೆ, ಐದೆಳೆ ಮಲ್ಲಿಗೆ ಹಾರ, ಹೊತ್ತಗೆ, ರೇಷ್ಮೆಶಾಲು ನೀಡಿ ಸನ್ಮಾನಿಸಲಾಯಿತು. ಅರಸರ ಸಾಧನೆಯನ್ನು ಗೌರವಿಸಿ ಹಾಡಿನ ಮೂಲಕ ಅಭಿವಂದನೆಯನ್ನು ಯಕ್ಷನೃತ್ಯದ ಮೂಲಕ ಸಮರ್ಪಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ, ಈ ನೆಲ, ಜಲ, ನಾಡು ನುಡಿಯ ರಕ್ಷಣೆಯಲ್ಲಿ ಮೈಸೂರು ಅರಸರ ಕೊಡುಗೆ ಅನನ್ಯವಾದುದು, ಅನುಪಮವಾದುದು. ಗುರುಕುಲ ಮಾದರಿಯಲ್ಲಿ ನಡೆಯುತ್ತಿರುವ ಈ ಸಂಸ್ಥೆ ನಮ್ಮ ಪೂರ್ವ ಸರ್ಯರು ಹಾಕಿಕೊಟ್ಟ ದಾರಿಯಲ್ಲಿ ಭಜನೆ, ಧ್ಯಾನ, ಯೋಗ, ಕಂಪ್ಯೂಟರ್, ತಂತ್ರಜ್ಞಾನ, ಯಕ್ಷಗಾನ ದೊಂದಿಗೆ ವಿದ್ಯಾರ್ಥಿಗಳ ಸೃಜನಾತ್ಮಕ ಬೆಳವಣಿಗೆಗೆ ಬೇಕಾದ ಎಲ್ಲ ವಿಚಾರ ಧಾರೆಗಳೊಂದಿಗೆ ಸಾಗುತ್ತಿದೆ. ನ್ಯೂಟನ್ನ ಸಿದ್ಧಾಂತಗಳೊಂದಿಗೆ ವಿವೇಕಾನಂದರ ಚಿಂತನೆ ಇಲ್ಲಿ ಒಂದಾಗಿ ಸಾಗುತ್ತಿದೆ. ಆ ನಿಟ್ಟಿನಲ್ಲಿ ಮೈಸೂರಿನ ಅರಸು ಮನೆತನ ನಮಗೆ ರಾಜ ಮಾರ್ಗ ಹಾಕಿಕೊಟ್ಟಿದೆ. ಅದಕ್ಕಾಗಿ ಆ ಅರಸು ಪೀಠಕ್ಕೆ ನಾವು ಅಭಾರಿಗಳು ಎಂದರು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ , ಅನುಪಮ ಸಾಧನೆಯೊಂದಿಗೆ ಈ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅರಸರೇ ಗೌರವಿಸಿದ್ದು ವಿದ್ಯೆ ಎಲ್ಲರಿಂದಲೂ ಗೌರವಿಸಲ್ಪಡುತ್ತದೆ ಎಂಬ ಸತ್ಯವನ್ನು ಈಗಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ದು ಪರಿಶ್ರಮಿಗಳಿಗೆ ಹೊಸ ಚೈತನ್ಯ ಹುರುಪು ತುಂಬಲಿದೆ ಎಂದರು.
ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯಲ್ಲಿ ಶೂನ್ಯ ತ್ಯಾಜ್ಯ ಕ್ಯಾಂಪಸ್ ಆಗಿ ಪರಿವರ್ತನೆಗೊಂಡ ಪ್ರಥಮ ಅನುದಾನರಹಿತ ವಿದ್ಯಾಸಂಸ್ಥೆ ಎಂಬ ಘೋಷಣೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆ ಪಾತ್ರವಾಗಿದ್ದು ಆ ಘೋಷಣಾ ಪತ್ರವನ್ನು ಸಂಸ್ಥೆಯ ಪ್ರಾಂಶುಪಾಲರು ವಾಚಿಸಿದರು.
ಸಂಸ್ಥೆಯ ವಿದ್ಯಾರ್ಥಿನಿಯರು ಮೈಸೂರು ಸಂಸ್ಥಾನದ ಗೀತೆಯನ್ನು ಹಾಡಿದರು. ಸಂಸ್ಥೆಯ ಕಸರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಶೈಕ್ಷಣಿಕ ನಿರ್ದೇಶಕರಾದ ಡಾ| ಬಿ.ಪಿ ಸಂಪತ್ ಕುಮಾರ್ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮಿ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕ ಡಾ| ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.




