ಮೂಡುಬಿದಿರೆ : ಹಿಂದೂ ಪದ್ಧತಿಯಲ್ಲಿ ಹಲವು ದೇವರಿದ್ದರೂ ಮೊದಲು ಪೂಜಿಸಲ್ಪಡುವುದು ವಿಘ್ನನಿವಾರಕ ಗಣಪತಿಯನ್ನು. ಅಲ್ಲದೆ ದೇಶಾದ್ಯಂತ ಏಕಕಾಲದಲ್ಲಿ ಆಚರಿಸುವ ಏಕೈಕ ಹಬ್ಬವೂ ಗಣೇಶೋತ್ಸವ. ವೈದ್ಯರು ರೋಗಿಯ ಶರೀರಕ್ಕೆ ಚಿಕಿತ್ಸೆ ನೀಡಿದರೆ, ಆಧ್ಯಾತ್ಮವು ಮಾನಸಿಕ, ಸಾಮಾಜಿಕ ಸ್ವಾಸ್ಥ್ಯವನ್ನು ನೀಡುತ್ತದೆ ಎಂದು ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಅವರು ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಸಮಾಜ ಮಂದಿರದಲ್ಲಿ ಆಚರಿಸುವ ಗಣೇಶೋತ್ಸವದ ವಜ್ರ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಗುಲಾಮಗಿರಿಯಿಂದ ಮುಕ್ತವಾಗಬೇಕೆಂಬ ಸಂಕಲ್ಪದಿಂದ ಆರಂಭಗೊಂಡ ಗಣೇಶೋತ್ಸವ ಇಂದು ದೇಶದೆಲ್ಲೆಡೆ ವೈಭವದಿಂದ ನಡೆಯುತ್ತಿದೆ. ಸಾಮೂಹಿಕ ಆಚರಣೆಗಳಿಂದ ಧಾರ್ಮಿಕ ಒಗ್ಗಟ್ಟು ಮೂಡುತ್ತಿದೆ. ಎಂದರು.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಣೇಶ ವಿಗ್ರಹಕ್ಕೆ ಹೂಮಾಲೆ ಹಾಕಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗಣಪತಿಯು ನಮ್ಮೆಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ನೀಡಲಿ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಕಟೀಲು ಕ್ಷೇತ್ರದ ಗೋಪಾಲಕೃಷ್ಣ ಅಸ್ರಣ್ಣ ಆಶೀರ್ವಚನ ನೀಡಿ, ಮಣ್ಣಿನಿಂದ ರೂಪುಗೊಂಡ ಗಣಪತಿ ಪ್ರಕೃತಿಯ ಆರಾಧನೆಯ ಮೂಲ. ನಾವು ಪರಿಸರ ಸಂರಕ್ಷಣೆ ಮಾಡುವ ಮೂಲಕ ಕಾಲ ಕಾಲಕ್ಕೆ ಶುದ್ಧ ಗಾಳಿ, ಮಳೆ, ಬೆಳೆ ಉಂಟಾಗುವಂತೆ ಮಾಡಲು ಸಾಧ್ಯವಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ತಿಮ್ಮಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದಿ| ಲಕ್ಷ್ಮಣ್ ಅವರ ಸ್ಮರಣಾರ್ಥ ಪ್ರಸನ್ನ ರಾವ್ ದಂಪತಿಗೆ ಗಣಪತಿಗೆ ಚಿನ್ನದ ಹಸ್ತ ಹಾಗೂ ರಾಜಾರಾಮ್ ನಾಗರಕಟ್ಟೆ ಅವರು ಸುಮಾರು ಒಂದು ಕೆಜಿ ತೂಕದ ಬೆಳ್ಳಿಯ ಮಲ್ಲಿಗೆ ಸರವನ್ನು ಸಮರ್ಪಿಸಿದರು. ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ. ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಾಜಾರಾಮ್ ನಾಗರಕಟ್ಟೆ ಸಾಂಸ್ಕೃತಿಕ ಮುನ್ನೋಟ ನೀಡಿದರು. ಕೃಷ್ಣರಾಜ ಹೆಗ್ಡೆ ವಂದಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
























