ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೇ.10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗುತ್ತದೆ. ಈಗಾಗಲೇ ನಾಮಪತ್ರ ಪರಿಶೀಲನೆ ಮುಕ್ತಾಯವಾಗಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು ಇಂದೇ (ಏ.24) ಕೊನೆಯ ದಿನವಾಗಿದೆ. ಅಧಿಕೃತವಾಗಿ ಕಣದಲ್ಲಿ ಉಳಿಯುವವರು ಯಾರು ಎಂಬುದು ಇಂದು ಸ್ಪಷ್ಟವಾಗಲಿದೆ. ಪ್ರಸ್ತುತ ಕಣದಲ್ಲಿ ಒಟ್ಟು 3130 ಅಭ್ಯರ್ಥಿಗಳಿದ್ದಾರೆ.
ಕಾಂಗ್ರೆಸ್ನಿಂದ 223 ಅಭ್ಯರ್ಥಿಗಳು, ಬಿಜೆಪಿಯಿಂದ 224, ಎಎಪಿಯಿಂದ 212, ಜೆಡಿಎಸ್ನಿಂದ 211, ಬಿಎಸ್ಸಿಯಿಂದ 137, ಸಿಪಿಐಎಂಯಿಂದ 4, ಎನ್ಪಿಪಿಯಿಂದ 4, ನೋಂದಾಯಿತ ಮತ್ತು ಮಾನ್ಯತೆರಹಿತ 736 , ಸ್ವತಂತ್ರ ಅಥವಾ ಪಕ್ಷೇತರ 1379, ಒಟ್ಟು 3130 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಇನ್ನು ಈ ಬಾರಿಯ ವಿಧಾನಸಭಾ ಚುನಾವಣೆ ಸಾಕಷ್ಟು ಪೈಪೋಟಿಯಿಂದ ಕೂಡಿದ್ದು ಪ್ರಮುಖ ಮೂರು ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಂಡಾಯವೆದ್ದ ಆಕಾಂಕ್ಷಿಗಳಲ್ಲಿ ಕೆಲವರು ಪಕ್ಷೇತರವಾಗಿ ನಾಮಿನೇಷನ್ ಫೈಲ್ ಮಾಡಿದ್ದು ಪ್ರಬಲ ಮೂರು ಪಕ್ಷಗಳಿಗೆ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ನಾಮಪತ್ರ ವಾಪಸ್ ಪಡೆಯಲು ಮೂರು ಪಕ್ಷಗಳು ಮನವಿ ಮಾಡಿಕೊಳ್ಳುತ್ತಿವೆ. ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ್ದರಿಂದ, ಅಖಾಡಕ್ಕಿಳಿದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದರ ಸಂಜೆ ವೇಳೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಎಷ್ಟು ಎಂದು ಪಕ್ಕಾ ಮಾಹಿತಿ ದೊರೆಯುತ್ತದೆ.