Share this news

ಬೆಂಗಳೂರು: ಅಲ್ಪಸಂಖ್ಯಾತರ ಮಹಿಳೆಯರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಜಾಮೀನು ಕೊಡಿಸಿದ ವಕೀಲನನ್ನು ಕಾಂಗ್ರೆಸ್ ಪಕ್ಷ ಉಚ್ಛಾಟನೆ ಮಾಡಿದೆ.

ಶ್ರೀರಂಗಪಟ್ಟಣದ ಕಾಂಗ್ರೆಸ್‍ನ ಕಾನೂನು ಘಟಕದ ಅಧ್ಯಕ್ಷರಾಗಿದ್ದ ಬಿ.ಚಂದ್ರೇಗೌಡರು ಕಲ್ಲಡ್ಕ ಪ್ರಭಾಕರ್ ಪರವಾಗಿ ವಕಾಲತ್ತು ವಹಿಸಿ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಾದಿಸಿದ್ದರು. ಜನವರಿ 17 ರಂದು ನ್ಯಾಯಾಲಯ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ವಿವಾದಿತ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬಂದಿದ್ದವು.ಕಳೆದ ತಿಂಗಳು 24 ರಂದು ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಸಂಕೀರ್ತನಾ ಯಾತ್ರೆಯಲ್ಲಿ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ತ್ರಿವಳಿ ತಲಾಖ್ ಕುರಿತಂತೆ ಮುಸ್ಲಿಂ ಮಹಿಳೆಯರ ವಿರುದ್ಧ ನೀಡಿದ್ದ ಹೇಳಿಕೆ ವಿವಾದಕ್ಕೀಡಾಗಿತ್ತು. ಸಾಮಾಜಿಕ ಕಾರ್ಯಕರ್ತೆ ನಸ್ಮಾ ನಾಸೀರ್ ದೂರು ನೀಡಿದ್ದರು. ಆಕೆಯ ದೂರನ್ನು ಆಧರಿಸಿ ವಿವಿಧ ಸೆಕ್ಷನ್‍ಗಳಡಿ ಪ್ರಕರಣವೂ ದಾಖಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆ ವೇಳೆ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಇದನ್ನು ಕಾಂಗ್ರೆಸ್‍ನಲ್ಲಿ ಹಲವು ಶಾಸಕರು, ಸಚಿವರು ವಿರೋಧಿಸಿದ್ದರು. ಹುಬ್ಬಳ್ಳಿಯ ಕರಸೇವಕನನ್ನು ಸುಲಭವಾಗಿ ಬಂಧಿಸುವುದಾದರೆ ಹಲವು ಪ್ರಕರಣಗಳು ದಾಖಲಾಗಿರುವ ಪ್ರಭಾಕರ್ ಭಟ್ ಅವರನ್ನು ಏಕೆ ಬಂಧಿಸುತ್ತಿಲ್ಲ ಎಂಬ ಚರ್ಚೆಗಳು ನಡೆದಿದ್ದವು.

ಕಾಂಗ್ರೆಸೇತರ ಕೆಲವು ಪಕ್ಷಗಳು ಸರ್ಕಾರದ ಧೋರಣೆಯನ್ನು ಟೀಕಿಸಿದ್ದಲ್ಲದೆ, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷ ಮತಬ್ಯಾಂಕನ್ನಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದೆ. ಉಳಿದಂತೆ ಮೃದು ಹಿಂದುತ್ವ ಅನುಸರಿಸುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಅದಕ್ಕೆ ಪೂರಕ ಎಂಬಂತೆ ಕಲ್ಲಡ್ಕ ಪ್ರಭಾಕರ್ ಭಟ್ ಪರವಾಗಿ ಕಾಂಗ್ರೆಸ್‍ನ ನಾಯಕರೂ ಆಗಿದ್ದ ಬಿ.ಚಂದ್ರೇಗೌಡ ವಾದ ಮಾಡಿದ್ದು ಮತ್ತಷ್ಟು ಮುಜುಗರ ಉಂಟುಮಾಡಿತ್ತು. ಜಾಮೀನು ದೊರೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗ್ರೆಸ್ ಚಂದ್ರೇಗೌಡರನ್ನು ಪಕ್ಷದ ಸದಸ್ಯತ್ವದಿಂದ ಉಚ್ಛಾಟನೆಗೊಳಿಸಿ ಕಾಂಗ್ರೆಸ್ ತಾನು ಅಲ್ಪಸಂಖ್ಯಾತರ ಪರವಾಗಿದೆ ಎಂದು ಬಿಂಬಿಸಿದೆ

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *