ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರೀಫ್ ಅಲಿಯಾಸ್ ಮಹಮ್ಮದ್ ಆರೀಫ್ ಎಂಬ ಶಂಕಿತ ಉಗ್ರನನ್ನು ಎನ್ಐಎ ತಂಡ ಬೇಟೆಯಾಡಿದ್ದು, ಆರೀಫ್ ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಅಂಶ ಬಯಲಾಗಿದೆ.
ಎರಡು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದ ಆರೀಫ್, ಉಗ್ರ ಸಂಘಟನೆಯಾದ ಅಲ್ ಖೈದಾ ಮತ್ತು ಐಸಿಸ್ ಸೇರುವ ಕನಸು ಕಂಡಿದ್ದ. ಅಲ್ಲದೆ ಅಲ್ ಖೈದಾಗೆ ಹಣ ನೀಡಿರುವುದು ಬಯಲಾಗಿದೆ. ತಿಂಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ದುಡಿಯುತಿದ್ದ ಆರೀಫ್ ಐವತ್ತು ಸಾವಿರ ಹಣ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.
ಆರೀಫ್ ಬಂಧನ ಬೆನ್ನಲ್ಲೆ ಎನ್ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ ವೇಳೆ ಮತ್ತೊಂದು ಪ್ರಕರಣದ ಸಾಮ್ಯತೆ ಇರುವುದು ಕಂಡು ಬಂದಿದ್ದು, ಸೆಪ್ಟೆಂಬರ್ನಲ್ಲಿ ತಿಲಕ್ ನಗರದಲ್ಲಿ ದಾಖಲಾದ ಪ್ರಕರಣದ ಜೊತೆಗೆ ಆರೀಫ್ ಪ್ರಕರಣ ಕೂಡ ಸಾಮ್ಯತೆ ಹೊಂದಿದೆ. ಅಖ್ತರ್ ಹುಸೇನ್ ಮತ್ತು ಜುಬಾ ನಂತೆ ಆರೀಫ್ ಕೂಡ ಸೋಷಿಯಲ್ ಮೀಡಿಯಾ ಮೂಲಕ ಗೌಪ್ಯ ಸಂಪರ್ಕ ಹೊಂದಿದ್ದ. ವಿದೇಶಿ ಹ್ಯಾಂಡ್ಲರ್ಸ್ ಜೊತೆ ಸಂಪರ್ಕ ಸಾಧಿಸಿ ಚಾಟಿಂಗ್ ಮಾಡ್ತಿದ್ದನಂತೆ. ಅಖ್ತರ್ ಹುಸೇನ್ ಹಾಗೂ ಜುಬಾ ಇಬ್ಬರು ಕೂಡ ಆಲ್ ಖೈದಾ ಜೊತೆಗೆ ನಂಟು ಹೊಂದಿದ್ದರು. ಆನ್ಲೈನ್ ಮೂಲಕ ನಂಟು ಬೆಳೆಸಿ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಯುವಕರನ್ನ ಸೆಳೆಯುವ ಪ್ರಯತ್ನ ಮಾಡುತ್ತಿದ್ದರು. ಬಳಿಕ ಯುವಕರಿಗೆ ಹಿಂಸೆ ಹಾಗೂ ಉಗ್ರ ಕೃತ್ಯದ ಬಗ್ಗೆ ಪ್ರಚೋದನೆ ಮಾಡುತ್ತಿದ್ದರು.
ಗೌಪ್ಯವಾಗಿ ಸೋಷಿಯಲ್ ಮೀಡಿಯಾ ಮೂಲಕ ಯುವಕರನ್ನ ಸೆಳೆದು ಪ್ರಚೋದನೆಗೆ ಯತ್ನಿಸಿದ್ದ. ಬೇರೆ ಬೇರೆ ಸೋಷಿಯಲ್ ಮೀಡಿಯಾ ಮೂಲಕ ಒಬ್ಬರಿಗೊಬ್ಬರು ಸಂಪರ್ಕವಿಲ್ಲದೆ ತಮ್ಮ ಕಾರ್ಯ ಸಾಧನೆ ಮಾಡುತ್ತಿದ್ದರು. ತಿಲಕ್ ನಗರದಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ತಂಡಗಳು ಆರೀಫ್ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಆರೀಫ್ ಮೊಬೈಲ್ ಮತ್ತು ಲ್ಯಾಪ್ ಟಾಪ್ ನಲ್ಲಿ ಮತ್ತಷ್ಟು ಗೌಪ್ಯ ಮಾಹಿತಿ ಇರುವ ಶಂಕೆ ವ್ಯಕ್ತವಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ.
ಶಾರಿಕ್, ಮಾಝ್, ಆಖ್ತರ್ ಹುಸೇನ್, ಜುಬಾ, ಆರೀಫ್ ಎಲ್ಲರೂ ಒಂದೆ ಸಂಘಟನೆ ಸೇರಿದ್ರು. ಇವರೆಲ್ಲರೂ ಒಟ್ಟಿಗೆ ಇದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಶಾರಿಕ್ ಸಹ ಅಲ್ ಖೈದಾ ಸಂಘಟನೆಗೆ ಸೇರಿದ್ದ. ಆತ ಬ್ಲಾಸ್ಟ್ ಮಾಡುವ ಬಗ್ಗೆ ಟ್ರೇನಿಂಗ್ ಪಡೆಯುತಿದ್ದ. ಸದ್ಯ ಅರೆಸ್ಟ್ ಅಗಿರುವ ಇಷ್ಟೂ ಅರೋಪಿಗಳ ಕೇಸ್ ಎನ್ಐಎ ಬಳಿಯಲ್ಲೆ ಇದೆ. ಇದೇ ರೀತಿ ರಾಜ್ಯದಲ್ಲಿ ಇನ್ನೂ ಹಲವಾರು ಜನರು ಅಲ್ ಖೈದಾ ಸೇರಿರುವ ಶಂಕೆ ವ್ಯಕ್ತವಾಗಿದೆ.