Share this news

✍️:ನಿತ್ಯಾನಂದ ಕಾಮತ್, ಮೂಡುಬಿದಿರೆ

‘ಮಕರ ಸಂಕ್ರಾಂತಿ’ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಇದರೊಂದಿಗೆ ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನನ್ನು ವಧಿಸಿದ್ದಳು ಎಂಬ ಕಥೆಯೂ ಇದೆ. ಸೂರ್ಯನ ಭ್ರಮಣದಿಂದಾಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ 80 ವರ್ಷಕ್ಕೊಮ್ಮೆ ಸಂಕ್ರಾಂತಿಯನ್ನು ಒಂದು ದಿನ ಮುಂದೂಡಲಾಗುತ್ತದೆ. 2024 ರಲ್ಲಿ ಮಕರ ಸಂಕ್ರಾಂತಿಯು 15 ಜನವರಿ 2024, ಸೋಮವಾರದಂದು ಆಚರಿಸಲಾಗುವುದು. ಸಂಕ್ರಾಂತಿಯಂದು ಒಬ್ಬರಿಗೊಬ್ಬರು ಎಳ್ಳು-ಬೆಲ್ಲ (ಎಳ್ಳು ಬೆಲ್ಲದ ಜೊತೆ ಕಬ್ಬು, ಕೊಬ್ಬರಿ, ಕಡಲೆಬೀಜ, ಹುರಿಗಡಲೆ ಕೂಡ) ಹಂಚುತ್ತಾರೆ. ಇದು ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಿಸುವ ಹಬ್ಬವಾಗಿದೆ.

ಕರ್ಕಾಟಕ ಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ತೀರ್ಥಸ್ನಾನವನ್ನು ಮಾಡುವುದು :
ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.ಎಳ್ಳು ಮತ್ತು ಸಂಕ್ರಾಂತಿಯ ಸಂಬಂಧ ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ. ಎಳ್ಳು ಸತ್ತ್ವಲಹರಿಗಳನ್ನು ಗ್ರಹಿಸಿ ಪ್ರಕ್ಷೇಪಿಸುತ್ತದೆ. ಎಳ್ಳು ಸೇವಿಸುವುದರಿಂದ ಆಂತರಿಕ ಶುದ್ಧಿಯಾಗುತ್ತದೆ. ಎಳ್ಳು-ಬೆಲ್ಲವನ್ನು ದೇವರಿಗೆ ನೈವೇದ್ಯವೆಂದು ಅರ್ಪಿಸಿ ಇತರರಿಗೆ ಹಂಚುವುದರಿಂದ ಅವರಲ್ಲಿಯೂ ಪ್ರೇಮಭಾವ ಮತ್ತು ಸಕಾರಾತ್ಮಕತೆ ಹೆಚ್ಚುತ್ತದೆ.

ಮಡಕೆ ಹಂಚುವುದು:
ಸಂಕ್ರಾಂತಿಯ ಹಬ್ಬಕ್ಕೆ ಮುತ್ತೈದೆಯರು ಸಣ್ಣ ಮಣ್ಣಿನ ಮಡಕೆಗಳನ್ನು ಹಂಚುತ್ತಾರೆ. ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಕೆಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿಯನ್ನು ಬಿಡಿಸಿ ಮಣೆ ಹಾಕಿ ಅದರ ಮೇಲೆ ಐದು ಮಡಕೆಗಳನ್ನಿಟ್ಟು ಅವುಗಳ ಪೂಜೆಯನ್ನು ಮಾಡುತ್ತಾರೆ. ಮೂರು ಮಡಕೆಗಳನ್ನು ಸೌಭಾಗ್ಯವತಿಯರಿಗೆ ದಾನವೆಂದು (ಬಾಗಿನ) ನೀಡುತ್ತಾರೆ, ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.

ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅರ್ಪಿಸುವುದು:
ಈ ದಿನ ಮಹಾದೇವನಿಗೆ ಎಳ್ಳು-ಅಕ್ಕಿಯನ್ನು ಅರ್ಪಣೆ ಮಾಡುವ ಅಥವಾ ಎಳ್ಳು-ಅಕ್ಕಿ ಮಿಶ್ರಿತ ಅರ್ಘ್ಯವನ್ನು ಅರ್ಪಣೆ ಮಾಡುತ್ತಾರೆ. ಪರ್ವದ ಈ ದಿನದಂದು ಎಳ್ಳಿಗೆ ವಿಶೇಷ ಮಹತ್ವವಿದೆ ಎಂದು ಪರಿಗಣಿಸಲಾಗಿದೆ. ಎಳ್ಳಿನ ಉಟಣೆ, ಎಳ್ಳುಮಿಶ್ರಿತ ನೀರಿನಿಂದ ಸ್ನಾನ, ಎಳ್ಳುಮಿಶ್ರಿತ ನೀರನ್ನು ಕುಡಿಯುವುದು, ಎಳ್ಳಿನಿಂದ ಹವನ ಮಾಡುವುದು, ಅಡುಗೆಯಲ್ಲಿ ಎಳ್ಳನ್ನು ಉಪಯೋಗಿಸುವುದು ಹಾಗೂ ಎಳ್ಳನ್ನು ದಾನ ಮಾಡುವುದು ಇವೆಲ್ಲ ಪಾಪನಾಶಕ ಕೃತಿಗಳಾಗಿವೆ.

ಅರಿಶಿಣ ಕುಂಕುಮದ ಮಹತ್ವ:
ಮುತ್ತೈದೆಯರು ಮಕರ ಸಂಕ್ರಾಂತಿಯಿಂದ ರಥ ಸಪ್ತಮಿಯ ವರೆಗೆ ಅರಿಶಿಣ ಕುಂಕುಮದ ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ಕಾಲಾವಧಿಯ ನಂತರ ತೇಜದ ಪ್ರಾಬಲ್ಯ ಕ್ರಮೇಣ ಕಾಡಿಮೆಯಾಗುವುದರಿಂದ, ಈ ವಿಧಿಯಿಂದ ದೊರೆಯುವಂತಹ ಪುಣ್ಯದರ್ಶಕ ಫಲಪ್ರಾಪ್ತಿಯ ಪ್ರಮಾಣವೂ ಕಡಿಮೆಯಾಗುತ್ತದೆ. ಅರಿಶಿಣ ಕುಂಕುಮದ ಕಾರ್ಯಕ್ರಮದ ಮಾಧ್ಯಮದಿಂದ ಮುತ್ತೈದೆಯರ ರೂಪದಲ್ಲಿ ಮನೆಗೆ ಆಗಮಿಸಿರುವ ಸಾಕ್ಷಾತ್ ಆದಿಶಕ್ತಿಯ ಪೂಜೆಯನ್ನು ನೆರವೇರಿಸಿದಂತಾಗುತ್ತದೆ.

ಯಥಾಶಕ್ತಿ ದಾನ ಮಾಡುವುದು:
ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ. ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ.

ಬಾಗಿನ ನೀಡುವುದು:
‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿರುವ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.

 

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *