ಹೆಬ್ರಿ: ಸರಕಾರಿ ಅಧಿಕಾರಿಗಳು ಸಚಿವ ಸುನಿಲ್ ಕುಮಾರ್ ಅವರ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ. ಪರಶುರಾಮ ಉತ್ಸವದ ಹೆಸರಿನಲ್ಲಿ ಅಧಿಕಾರಿಗಳು ಬೇಕಾಬಿಟ್ಟಿ ಅಲೆಯುತ್ತಿದ್ದು, ಜನಸಾಮಾನ್ಯರು ತಮ್ಮ ದೈನಂದಿನ ಕೆಲಸಗಳಿಗೆ ಪರದಾಡುವಂತಾಗಿದ್ದು ಸಚಿವರು ಇಡೀ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಸರಕಾರಿ ಕಛೇರಿಗಳು ನಿಷ್ಕ್ರಿಯವಾಗಿದೆ. ತಹಶೀಲ್ದಾರರಿಂದ ಹಿಡಿದು ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಕಛೇರಿಗಳಲ್ಲಿ ಕಾರ್ಯನಿರ್ವಹಿಸಬೇಕಾದ ಅಧಿಕಾರಿಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿ, ಸಚಿವರ ಬೆನ್ನ ಹಿಂದೆ ಸುತ್ತುತ್ತಿರುವುದು ನಾಚಿಕೆಕೇಡಿನ ಸಂಗತಿ.
ಇಡೀ ಯಂತ್ರವನ್ನು ದುರ್ಬಳಕೆ ನಡೆಸುತ್ತಿರುವ ಜವಾಬ್ದಾರಿಯುತ ಸಚಿವರು ಜನರ ಕುಂದುಕೊರತೆ ಆಲಿಸದೇ ದರ್ಪದಿಂದ ವರ್ತಿಸುತ್ತಿದ್ದಾರೆ. ಮೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಸ್ಥಗಿತಗೊಂಡರೆ ಸಿಬ್ಬಂದಿಗಳಿಲ್ಲ. ಶಾಲೆಗಳಲ್ಲಿ ಅಧ್ಯಾಪಕರು ಇಲ್ಲ ಮತ್ತು ಆರೋಗ್ಯ ಇಲಾಖೆಯಲ್ಲಿ ವೈದ್ಯರಿಲ್ಲ,. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರನ್ನು ಸಚಿವರ ಮನೆಗೆಲಸ ಆಳುಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಜನತೆಯ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ.ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಡತಗಳು ಒಂದು ಟೇಬಲ್ ನಿಂದ ಮತ್ತೊಂದು ಟೇಬಲ್ಗೆ ಹೋಗಬೇಕಾದರೆ ಸಚಿವರ ದಲ್ಲಾಳಿಗಳ ಅನುಮತಿಬೇಕು. ಭ್ರಷ್ಟ ವ್ಯವಸ್ಥೆಯ ಮೂಲಕ ಕಾರ್ಕಳವನ್ನು ಹಾಳುಗೆಡವಿದ್ದಾರೆ ಎಂದು ಆರೋಪಿಸಿದ್ದಾರೆ.
ಜನರು ಬೇವರು ಸುರಿಸಿದ ತೆರಿಗೆ ಹಣವನ್ನು ಲೂಟಿ ಮಾಡಿ ಕಾರ್ಕಳ ಉತ್ಸವ, ಥೀಮ್ಪಾರ್ಕ್ಗಳ ಪ್ರಚಾರಗಳು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಯಾಕೆ?, ಸಂಸ್ಕೃತಿ ಇಲಾಖೆ ಎಷ್ಟು ಖರ್ಚು ಮಾಡಲು ಅನುದಾನ ಇದೆ ಎಂಬುದನ್ನು ಬಜೆಟ್ನಲ್ಲಿ ಮುಂಗಡ ಇಟ್ಟಿದ್ದಾರೆಯೇ? ಸಂವಿಧಾನ ಆಶಯಗಳನ್ನು ಬುಡಮೇಲು ಮಾಡಿ ಭ್ರಷ್ಟಕೂಟವನ್ನು ಕಟ್ಟಿಕೊಂಡು ಯಾವುದೇ ರೀತಿಯ ಕಾನೂನಿನ ಬೆಲೆ ಇಲ್ಲದೇ ಭ್ರಷ್ಟಚಾರ ಬೆಲೆ ಏರಿಕೆ, ನಿರುದ್ಯೋಗ, ವ್ಯಾಪಾರ ಉದ್ದಿಮೆಗಳು ದಿವಾಳಿಯಾಗುತ್ತಿದ್ದು ಜನರು ಕಂಗೆಟ್ಟಿದ್ದಾರೆ. ಜನರ ಕುಂದು ಕೊರತೆಗಳನ್ನು ಕೇಳುವರೇ ಇಲ್ಲವಾಗಿದೆ. ಅಭಿವೃದ್ಧಿಯ ಜತೆಗೆ ಜನರ ಜೀವನಮಟ್ಟ ಸುಧಾರಿಸುವ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ನೀವು ಮಾಡಿದ್ದೀರಾ ಎನ್ನುವುದನ್ನು ಮೊದಲು ಅರಿತುಕೊಳ್ಳಿ.ನಿಮ್ಮ ಹಾಗೂ ನಿಮ್ಮ ಹಿಂಬಾಲಕ ದುರಾಡಳಿತ,ದಬ್ಬಾಳಿಕೆಯಿಂದ ಜನ ರೋಸಿಹೋಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಂಜುನಾಥ ಪೂಜಾರಿಉ ಆಕ್ರೋಶ ಹೊರಹಾಕಿದ್ದಾರೆ.