ಕಾರ್ಕಳ: ಗೋವು ಸಂಪತ್ತು ದೇಶದ ಶ್ರೇಷ್ಠ ಸಂಪತ್ತು, ಕರುಸಾಕಾಣಿಕೆ ಮತ್ತು ಹಸುಗಳ ಪೋಷಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಿದಾಗ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿಯೂ ಯಶಸ್ಸನ್ನು ಕಾಣಲು ಸಾಧ್ಯ ಎಂದು ಪಶು ಸಂಗೋಪನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರೆಡ್ಡಪ್ಪ ಅಭಿಪ್ರಾಯಪಟ್ಟರು
ಅವರು ಉಡುಪಿ ಜಿಲ್ಲಾ ಪಂಚಾಯತ್, ಪಶು ಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆ ಕಾರ್ಕಳ, ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು, ಉದಯರವಿ ಕಲಾವೃಂದ (ರಿ.), ಮುದ್ದಣ್ಣ ನಗರ, ಸಾಣೂರು ಇವರ ಸಹಭಾಗಿತ್ವದಲ್ಲಿ ಶುಕ್ರವಾರ ಸಾಣೂರು ಗರಡಿ ಬಳಿಯ ಉದಯ ರವಿ ಕಲಾವೃಂದ(ರಿ.) ವಠಾರದಲ್ಲಿ ಮಿಶ್ರ ತಳಿ ಕರು ಮತ್ತು ಹಸು ಪ್ರದರ್ಶನ ಸ್ಪರ್ಧೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲಾಖಾ ವತಿಯಿಂದ ಮಿಶ್ರತಳಿ ಕರು ಮತ್ತು ಹಸು ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ಸದುದ್ದೇಶವನ್ನು ಹೊಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಕಡಂದಲೆ ಮಾತನಾಡಿ, ಕೋವಿಡ್ ಸಂಕಷ್ಟದ ನಂತರ ಕಳೆದೆರಡು ವರ್ಷಗಳಲ್ಲಿ ಚರ್ಮ ಗಂಟು ರೋಗ ಬಾಧೆಯಿಂದ ಸಂಕಷ್ಟಕ್ಕೆ ಒಳಗಾದ ಹೈನುಗಾರಿಕೆಗೆ ಪುನಶ್ಚೇತನ ನೀಡಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಮಿಶ್ರ ತಳಿ ಕರು ಸಾಕಾಣಿಕ ಯೋಜನೆಯನ್ನು 1.5 ಕೋಟಿ ರೂಪಾಯಿಯನ್ನು ವಿನಯೋಗಿಸುವುದರ ಮೂಲಕ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಜಾರಿಗೆ ತಂದಿದ್ದು ಈಗಾಗಲೇ ಉಡುಪಿ ಮತ್ತು ದ.ಕ ಜಿಲ್ಲಾ ವ್ಯಾಪ್ತಿಯ ಏಳು ಸಾವಿರ ಮಿಶ್ರತಳಿ ಹೆಣ್ಣು ಕರುಗಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ ಎಂದರು.
ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದ.ಕ ಹಾಲು ಒಕ್ಕೂಟದ ಶೇಖರಣೆ ಮತ್ತು ತಾಂತ್ರಿಕ ವಿಭಾಗದ ಮ್ಯಾನೇಜರ್ ರಾಮಕೃಷ್ಣ ಭಟ್, ವಿಸ್ತರಣಾಧಿಕಾರಿ ಶಿವಕುಮಾರ್, ಸಾಣೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರಾಮ ಭಟ್,ಕೆಎಂಎಫ್ ಮಂಗಳೂರು ನಿರ್ದೇಶಕ ಮುಡಾರು ಸುಧಾಕರ ಶೆಟ್ಟಿ, ಸಾಣೂರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಮಧು ಮಾತನಾಡಿದರು.
ವೇದಿಕೆಯಲ್ಲಿ ಸುಭಾಷ್ ಚಂದ್ರ ಬಲಿಪ, ಪ್ರಭಾತ್ ನಾಯಕ್, ಶಿವಾನಂದ ಪೂಜಾರಿ, ಧರ್ಮಡ್ಕ ಸುಂದರ ಶೆಟ್ಟಿ,ಪ್ರವೀಣ ಶೆಟ್ಟಿ, ಸಾಣೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಯಶೋದಾ ಶೆಟ್ಟಿ, ಸದಸ್ಯರಾದ ಕರುಣಾಕರ ಕೋಟ್ಯಾನ್, ಗಿರಿಜಾ, ಪ್ರಮೀಳಾ ಉಪಸ್ಥಿತರಿದ್ದರು.
ಸಚ್ಚರಿಪೇಟೆ ಸುಧೀರ್ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 52 ಮಂದಿ ಹೈನುಗಾರರಿಂದ 69 ಮಿಶ್ರತಳಿ ಕರು ಮತ್ತು ವಿವಿಧ ಹಸುಗಳ ಪ್ರದರ್ಶನ ಸ್ಪರ್ಧೆ ನಡೆಯಿತು
ವಿಭಾಗದಲ್ಲಿ ಸ್ಪರ್ಧೆ:
ಜೆರ್ಸಿ ವಿಭಾಗದಲ್ಲಿ 13, ಎಚ್ಎಫ್ ವಿರುಗಾಗದಲ್ಲಿ 06, ಸ್ಥಳೀಯ ವಿಭಾಗದಲ್ಲಿ 20 ಮತ್ತು ಕರುಗಳ ವಿಭಾಗದಲ್ಲಿ 20 ವಿವಿಧ ತಳಿಗಳ ಕರುಗಳು ಭಾಗವಹಿಸಿದ್ದವು.
ವಿಶೇಷ ಗೋತಳಿಗಳ ಪ್ರದರ್ಶನ:
ವೆಂಕಟರಮಣ ಗೋಶಾಲೆ ಕಾರ್ಕಳ ದಿಂದ ವಿವಿಧ ರಾಜ್ಯಗಳ ವಿಶೇಷ ಹಸುವಿನ ತಳಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಗಿರ್, ಸಾಹಿವಾಲ (ಗುಜರಾತ್) ಕಾಂಕ್ರೇಜ್( ಹರಿಯಾಣ) ಕಿಲಾರಿ (ಮಹಾರಾಷ್ಟ್ರ).ದೇವಣಿ ( ಬೀದರ್, ಕರ್ನಾಟಕ)ಪ್ರಮುಖ ಆಕರ್ಷಣೆಯಾಗಿದ್ದವು.
ಕರುಗಳ ವಿಭಾಗದಲ್ಲಿ ಪ್ರಥಮ: ಜಯಾನಂದಮೂಲ್ಯ, ದ್ವಿತೀಯ: ಮಂಜುಳಾ, ತೃತೀಯ: ಪದ್ಮಿನಿ. ಜರ್ಸಿ ತಳಿ ಹಸುಗಳ ವಿಭಾಗದಲ್ಲಿಪ್ರಥಮ : ವಿಶ್ವನಾಥ್ ಶೆಟ್ಟಿಗಾರ್, ದ್ವಿತೀಯ: ವಿನೋದ ಶೆಟ್ಟಿ ತೃತೀಯ: ಕೊರಗಶೆಟ್ಟಿ ಮತ್ತು ಪ್ರೋತ್ಸಾಹಕ : ಸಮಿತಾ ಗುರುಪ್ರಸಾದ್, ಹೆಚ್ ಎಫ್ ಹಸುಗಳ ವಿಭಾಗದಲ್ಲಿ ಪ್ರಥಮ : ತೇಜಸ್ವಿನಿ ,ದ್ವಿತೀಯ: ಲಾರೆನ್ಸ್ ತ್ರತೀಯ: ಕೃಷ್ಣ .ಎಲ್. ಪೂಜಾರಿ ಮತ್ತು ಪ್ರೋತ್ಸಾಹಕ: ಡಾ. ಕೆ. ಎಸ್. ರಾವ್. ಸ್ಥಳೀಯ ತಳಿಗಳ ಹಸು ವಿಭಾಗದಲ್ಲಿ ಪ್ರಥಮ : ಶ್ಯಾಮಲಾ, ದ್ವಿತೀಯ : ರಾಯಲ್, ತೃತೀಯ: ಮಹೇಶ್ ಭಂಡಾರ್ಕರ್.
ಚಾಂಪಿಯನ್ ಹಸುವಾಗಿ ಸಾಣೂರು ರೇವಂತ ಫಾರ್ಮ ಡಾ.ಕೆ .ಎಸ್ .ರಾವ್ ರವರ ಊರ ದನ ಸ್ಥಳೀಯ ವಿಭಾಗದಿಂದ ಮೂಡಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು
ಕಾರ್ಕಳ ಪಶುಸಂಗೋಪನ ಇಲಾಖೆಯ ಡಾ. ವಾಸುದೇವ ಪೈ ಯವರ ನೇತೃತ್ವದಲ್ಲಿ ಆರು ಜನ ಪಶು ವೈದ್ಯರ ತಂಡ ತೀರ್ಪುಗಾರರಾಗಿ ಹಾಗೂ ಏಳು ಮಂದಿ ಸಿಬ್ಬಂದಿಗಳು ವ್ಯವಸ್ಥೆಗೆ ಸಹಕರಿಸಿದರು.
ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ