Share this news

ನವದೆಹಲಿ: ಕೇಂದ್ರೀಯ ತನಿಖಾ ದಳದ (CBI) ನಿರ್ದೇಶಕರಾಗಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್  ಅವರನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಸಿಬಿಐ ನಿರ್ದೇಶಕರ ಹುದ್ದೆಗೆ ಉನ್ನತ ಮಟ್ಟದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚರ್ಚಿಸಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಒಳಗೊಂಡ ಉನ್ನತ ಮಟ್ಟದ ಸಮಿತಿ ಚರ್ಚಿಸಿ ನಿರ್ಧಾರ ಮಾಡಿದೆ.

1964 ರಲ್ಲಿ ಜನಿಸಿದ ಪ್ರವೀಣ್ ಸೂದ್, IIT ದೆಹಲಿಯಿಂದ ಪದವಿ ಪಡೆದರು, 1986 ರಲ್ಲಿ IPS ಗೆ ಸೇರಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1989 ರಲ್ಲಿ ಮೈಸೂರು ಪೊಲೀಸ್ ಅಧೀಕ್ಷಕರು. ಅವರು ಬೆಂಗಳೂರು ನಗರಕ್ಕೆ ಕಾನೂನು ಮತ್ತು ಸುವ್ಯವಸ್ಥೆ, ಉಪ ಪೊಲೀಸ್ ಆಯುಕ್ತರಾಗಿ ನಿಯೋಜನೆಗೊಳ್ಳುವ ಮೊದಲು ಬಳ್ಳಾರಿ ಮತ್ತು ರಾಯಚೂರು ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸಿದ್ದರು.1999 ರಲ್ಲಿ, ಅವರು 3 ವರ್ಷಗಳ ಕಾಲ ಮಾರಿಷಸ್ ಸರ್ಕಾರದ ಪೊಲೀಸ್ ಸಲಹೆಗಾರರಾಗಿ ವಿದೇಶಿ ಪ್ರತಿನಿಧಿಯಾಗಿದ್ದರು. 2004 ರಿಂದ 2007 ರ ಅವಧಿಯಲ್ಲಿ ಮೈಸೂರು ನಗರದ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡರು. ಮೈಸೂರಿನಲ್ಲಿ ತನ್ನ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಫೆಬ್ರವರಿ 2008 ರಲ್ಲಿ ಬೆಂಗಳೂರಿನ ಸಂಚಾರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡು ಸೆಪ್ಟೆಂಬರ್ 2011 ರವರೆಗೆ ಸೇವೆ ಸಲ್ಲಿಸಿದರು. ತಂತ್ರಜ್ಞಾನ ಚಾಲಿತ ಸಂಚಾರ ನಿರ್ವಹಣೆಯ ಹಾಗೂ ಬೆಂಗಳೂರು ನಗರದಲ್ಲಿ ಅತ್ಯಾಧುನಿಕ ಸಂಚಾರ ನಿರ್ವಹಣಾ ಕೇಂದ್ರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.2013-14ರಲ್ಲಿ ಅವರು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ನಂತರ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್​ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆಡಳಿತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.

ಸಿಐಡಿ, ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕಗಳ ಪೊಲೀಸ್ ಮಹಾನಿರ್ದೇಶಕರಾಗಿ, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಉತ್ತಮ ತನಿಖೆ ಮತ್ತು ಜಾಗೃತಿಗಾಗಿ ಅವರು ಪ್ರಮುಖ ಉಪಕ್ರಮವನ್ನು ಕೈಗೊಂಡಿದ್ದಾರೆ. ಸೈಬರ್ ಅಪರಾಧಗಳ ತನಿಖೆ ಮತ್ತು ವಿಚಾರಣೆಗಳಿಗೆ ಸಾಮರ್ಥ್ಯವನ್ನು ಸೃಷ್ಟಿಸಲು ಇನ್ಫೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಸಿಐಡಿ ಅತ್ಯಾಧುನಿಕ “ಸೆಂಟರ್ ಫಾರ್ ಸೈಬರ್-ಕ್ರೈಮ್ ಇನ್ವೆಸ್ಟಿಗೇಷನ್, ಟ್ರೈನಿಂಗ್ ಅಂಡ್ ರಿಸರ್ಚ್” ಅನ್ನು ಸ್ಥಾಪಿಸುವ ಮೂಲಕ ದೊಡ್ಡ ಹೆಜ್ಜೆ ಇಡಲು ಕಾರಣಕರ್ತರಾಗಿದ್ದಾರೆ.

1996ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ, 2002ರಲ್ಲಿ ಶ್ಲಾಘನೀಯ ಸೇವೆಗಾಗಿ ಪೊಲೀಸ್ ಪದಕ ಹಾಗೂ 2011ರಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಪಡೆದಿದ್ದಾರೆ. ಇದಲ್ಲದೆ ಅವರು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಗೆ ನೀಡಿದ ಕೊಡುಗೆಗಾಗಿ 2006 ರಲ್ಲಿ ಪ್ರಿನ್ಸ್ ಮೈಕೆಲ್ ಇಂಟರ್ನ್ಯಾಷನಲ್ ರಸ್ತೆ ಸುರಕ್ಷತಾ ಪ್ರಶಸ್ತಿ ಮತ್ತು 2011 ರಲ್ಲಿ ಸಂಚಾರ ನಿರ್ವಹಣೆಗೆ ತಂತ್ರಜ್ಞಾನದ ಅತ್ಯಂತ ನವೀನ ಬಳಕೆಗಾಗಿ ರಾಷ್ಟ್ರೀಯ ಇ-ಆಡಳಿತ ಗೋಲ್ಡ್ ಪ್ರಶಸ್ತಿಯನ್ನು ಪಡೆದಿದ್ದಾರೆ.

Leave a Reply

Your email address will not be published. Required fields are marked *