ಉಡುಪಿ : ಹತ್ತು ವರ್ಷದ ಹಿಂದೆ ಚಿನ್ನಾಭರಣ ಸುಲಿಗೆ ಪ್ರಕರಣಕ್ಕೆ ಸಂಬAಧಿಸಿದಂತೆ ಇಬ್ಬರು ಆರೋಪಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 5,000 ರೂ. ದಂಡ ವಿಧಿಸಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಹಾಗು ಸಂಚಾರಿ ನ್ಯಾಯಾಲಯ ಕಾರ್ಕಳದ ನ್ಯಾಯಧೀಶ ದಿನೇಶ್ ಹೆಗ್ಡೆ ಆದೇಶಿಸಿದ್ದಾರೆ.
ಆರೋಪಿಗಳಾದ ಮುನಿಯಾಲಿನ ಮಧುಕರ ಆಚಾರ್ಯ(36) ಹಾಗು ಕುಂಭಾಶಿ ನಿವಾಸಿ ಪ್ರಶಾಂತ್ ಆಚಾರ್ಯ (36) ನಿಗೆ ಶಿಕ್ಷೆ ನೀಡಿ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2013 ರ ಸೆಪ್ಟೆಂಬರ್ 9 ರಂದು ರಾತ್ರಿ ಕಾರ್ಕಳದ ಕಸಬಾ ಗ್ರಾಮದ ಮಹಾಲಕ್ಷ್ಮಿ ಓಣಿಯಲ್ಲಿ ರಾಮಚಂದ್ರ ಮಾನೆ ಎಂಬವರ ಮಾಲೀಕತ್ವದ ಲಕ್ಷ್ಮೀ ಗೋಲ್ಡ್ ವರ್ಕ್ಸ್ ಚಿನ್ನಾಭರಣ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಬ್ಯಾಗ್ ನಲ್ಲಿಟ್ಟುಕೊಂಡು ಮನೆಗೆ ತೆರಳಲು ಸಿದ್ದತೆ ನಡೆಸುತ್ತಿದ್ದಾಗ, ಸ್ಯಾಂಟ್ರೋ ಕಾರಿನಲ್ಲಿ ಆಗಮಿಸಿದ 6 ಜನರ ತಂಡದಲ್ಲಿ ಇಬ್ಬರು ಅಂಗಡಿಯ ಒಳಕ್ಕೆ ನುಗ್ಗಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ, 42,67, 832 ರೂ 1.50 ಕೆಜಿ ಚಿನ್ನಾಭರಣ ಮತ್ತು 40,000 ನಗದನ್ನು ದರೋಡೆಗೈದು ಪರಾರಿಯಾಗಿದ್ದರು.
ಅಂದು ರಾತ್ರಿ ಖಚಿತ ಮಾಹಿತಿ ಆಧರಿಸಿ ಹಿರಿಯಡ್ಕ ಠಾಣಾ ಪೋಲಿಸರು ಹಿರಿಯಡ್ಕದಲ್ಲಿ ರಾತ್ರಿ 9.40 ರ ಸುಮಾರಿಗೆ ಸ್ಯಾಂಟ್ರೋ ಕಾರನ್ನು ತಡೆದು ಪರಿಶೀಲಿಸಿದಾಗ ಐವರು ಪರಾರಿಯಾಗಿದ್ದು, ಮಧುಕರ ಆಚಾರಿಯನ್ನು ಬಂಧಿಸಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದರು. ನಂತರ ಉಳಿದ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ ಆಭರಣಗಳನ್ನು ವಶಕ್ಕೆ ಪಡೆಯಲಾಗಿತ್ತು.
ಇಬ್ಬರು ಮೃತ, ಇಬ್ಬರು ಖುಲಾಸೆ:
ಆರು ಜನ ಆರೋಪಿಗಳಲ್ಲಿ ಮೋಹನ್ ಮೊಗವೀರ ಮತ್ತು ಚಂದ್ರ ಮೊಗವೀರ ಮೃತಪಟ್ಟಿದ್ದು, ಉಳಿದ ಇಬ್ಬರು ಆರೋಪಿಗಳಾದ ಕುಂದಾಪುರದ ಕೋಣಿ ನಿವಾಸಿ ಚಂದ್ರ ಆಚಾರ್ಯ ಮತ್ತು ಆನಗಳ್ಳಿ ನಿವಾಸಿ ಶಾಹಿದ್ ಅಲಿಯನ್ನು ಸಾಕ್ಷ್ಯಧಾರಗಳ ಕೊರತೆಯಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.
ಅಂದಿನ ಕಾರ್ಕಳದ ವೃತ್ತನಿರೀಕ್ಷಕ ಜಿ.ಎಮ್. ನಾಯ್ಕರ್ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಒಟ್ಟು 35 ಸಾಕ್ಷಿಗಳಲ್ಲಿ, 20 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಸರಕಾರದ ಪರ ಸರಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದ್ದರು