Share this news

ಬೆಂಗಳೂರು : ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಹಲಾಲ್ ರಹಿತ ಉತ್ಪನ್ನಗಳನ್ನು ಉಪಯೋಗಿಸಿ ‘ಹಲಾಲ್` ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಜನಜಾಗೃತಿ ಸಮಿತಿಯಿಂದ ಭಾನುವಾರ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಯಶವತಪುರ, ಯಲಹಂಕ, ವಿದ್ಯಾರಣ್ಯಪುರ ಸೇರಿದಂತೆ ವಿವಿಧೆಡೆಗಳಲ್ಲಿ ಗಣೇಶೋತ್ಸವ ಮಂಡಳಿಗಳು, ಅಂಗಡಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಮಾತನಾಡಿ, ‘ಗಣೇಶೋತ್ಸವ ಆಚರಣೆಯ ಸಮಯದಲ್ಲಿ ಶ್ರೀ ಗಣೇಶನ ಪೂಜಾ ಸಾಮಗ್ರಿಗಳು ಮತ್ತು ಪ್ರಸಾದವು ’ಹಲಾಲ್ ಪ್ರಮಾಣೀಕೃತ’ ಆಗಿಲ್ಲವಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮೂಲತಃ ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿದ್ದ `ಹಲಾಲ್’ ಎಂಬ ಮೂಲ ಇಸ್ಲಾಮಿಕ್ ಪರಿಕಲ್ಪನೆಯು ಇಂದು ಆಹಾರ ಧಾನ್ಯಗಳು, ಸಿಹಿತಿಂಡಿಗಳು, ಸೌಂದರ್ಯವರ್ಧಕಗಳು, ಸಸ್ಯಾಹಾರಿ ಆಹಾರಗಳು, ಔಷಧಗಳು, ಪ್ರವಾಸೋದ್ಯಮ, ಆಸ್ಪತ್ರೆಗಳು, ಕಟ್ಟಡಗಳು, ರೆಸ್ಟೋರೆಂಟ್‌ಗಳು, ವೆಬ್‌ಸೈಟ್‌ಗಳು ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕಾಲಿಟ್ಟಿದೆ. ಹಾಗಾಗಿ ಈ ಬಾರಿ ಗಣೇಶೋತ್ಸವದಲ್ಲಿ ಗಣೇಶ ಭಕ್ತರಿಗೆ ‘ಹಲಾಲ್ ಪ್ರಮಾಣ ಪತ್ರ’ದ ಬಗ್ಗೆ ಮಾಹಿತಿ ನೀಡುವ ಕರಪತ್ರ ಹಂಚುವುದು, ಹಲಾಲ್ ಪ್ರಮಾಣಪತ್ರದ ಬಗ್ಗೆ ವಿರೋಧವನ್ನು ನೊಂದಾಯಿಸಲು ‘ಆನ್ ಲೈನ್ ಅರ್ಜಿ ಸಹಿ’ ವ್ಯವಸ್ಥೆ ಕಲ್ಪಿಸಿ, ಗಣೇಶ ಭಕ್ತರಿಗೆ ಸಹಿ ಮಾಡಲು ಜನಜಾಗೃತಿ ಮೂಡಿಸುವುದು ಈ ರೀತಿಯಾಗಿ ’ಹಲಾಲ್ ಮುಕ್ತ ಗಣೇಶೋತ್ಸವ’ ಆಚರಿಸಿರಿ` ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ, ಮಹಾಲಕ್ಷ್ಮಿ ಲೆಔಟ್ ಹಿಂದೂ ಮಹಾಗಣಪತಿ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಮಲ್ಲೇಶ್, ಸದಸ್ಯರಾದ ಚೇತನ್, ರವಿ C, ಮಂಜು, ಸಂದೀಪ್,ನವೀನ್, ಯಶವತಪುರ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ, ಸದಸ್ಯ ಗಿರೀಶ್ ಪೂಜಾರಿ, ಹಿಂದೂ ಯುವಕರ ಸಂಘ ಗಣೇಶೋತ್ಸವ ಮಂಡಳಿ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಬಾಗಲಕೋಟೆ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆ, ಗೋವಾ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ದೇಶಾದ್ಯಂತ ಹಲವು ಕಡೆಗಳಲ್ಲಿ ಮನವಿ ನೀಡಲಾಗಿದ್ದು, ಈ ಬಾರಿ ‘ಹಲಾಲ್ ಮುಕ್ತ ಗಣೇಶೋತ್ಸವ` ಆಚರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.

Leave a Reply

Your email address will not be published. Required fields are marked *