ರಾಯಚೂರು: ಶಕ್ತಿನಗರದಲ್ಲಿರುವ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ನಲ್ಲಿ ನಡೆದ ಅವಘಡಗಳಲ್ಲಿ 3 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಇಂದು(ಬುಧವಾರ) ನಡೆದಿದೆ.
ಘಟಕ 1 ಮತ್ತು ಘಟಕ 2 ಮಧ್ಯೆದಲ್ಲಿನ ಕಲ್ಲಿದ್ದಲು ಜಮಾ ಮಾಡುವ ವೇಳೆ ಈ ದುರಂತ ಸಂಭವಿಸಿದ್ದು, ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಏಕಾಏಕಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮೂವರ ಪೈಕಿ ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು, ಉಳಿದ ಇಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯವಾಗಿವೆ. ಇನ್ನು ಗಾಯಾಳುಗಳು ಹೊರರಾಜ್ಯದವರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿದ ಆರ್ಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡ ರಂಗಾರೆಡ್ಡಿ, RTPS ಘಟಕದಲ್ಲಿ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಕಳೆದ ಮೂರು ವರ್ಷಗಳಿಂದ ಶಿಥಿಲಗೊಂಡಿದ್ದ ಕಟ್ಟಡವನ್ನು ದುರಸ್ತಿ ಮಾಡಲು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಕಟ್ಟಡ ಕುಸಿದು ಒಂದು ಕಡೆ ಬಿದ್ದು ಹಾಳಾಗಿತ್ತು. ಕಟ್ಟಡ ದುರಸ್ತಿಗೆ ಬರುವ 50 ಕಾರ್ಮಿಕರು 25-30 ವರ್ಷದ ಆಸುಪಾಸಿನಲ್ಲಿದ್ದು, ಕಡಿಮೆ ಸಂಬಳ ನೀಡಿ, ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ.
ಅಲ್ಲದೆ, ಕಾರ್ಮಿಕರ ಜೀವ ಜೊತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಕಂಪನಿಯಲ್ಲಿ ಸರ್ಕಾರ ನಿಯಮಗಳು ಗಾಳಿಗೆ ತೂರಿ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಇದರ ಪರಿಣಾಮವೇ ಈ ದುರಂತ ಸಂಭವಿಸಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಈ ಘಟನೆಗೆ ನೇರ ಹೊಣೆ. ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.