ಕಾರ್ಕಳ : ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ವಾಗ್ಮಿ ಅಂಬಾತನಯ ಮುದ್ರಾಡಿ ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಮುದ್ರಾಡಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಂಬಾತನಯ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಕಾರ್ಕಳ ಮಾತ್ರವಲ್ಲದೆ ಇಡೀ ಕನ್ನಡ ನಾಡಿನ ಸಾಂಸ್ಕೃತಿಕ ಪ್ರಜೆಯಾಗಿದ್ದರು. ಸಾಹಿತ್ಯ ಮತ್ತು ಸಂಸ್ಕೃತಿಯ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದ್ದ ಮುದ್ರಾಡಿಯವರು ಅಜಾತಶತ್ರುವಾಗಿದ್ದರು. ಅಪ್ರತಿಮ ವಾಗ್ಮಿಯಾಗಿದ್ದ ಅವರ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕೆ ಮೋಡಿ ಮಾಡುತ್ತಿತ್ತು. ಹರಿದಾಸರಾಗಿ, ವಚನಕಾರರಾಗಿ, ಅಂಕಣಕಾರರಾಗಿ, ನಾಟಕಕಾರಾಗಿ , ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಂಬಾತನಯ ಮುದ್ರಾಡಿ ನಿಜವಾಗಿಯೂ ಸರಸ್ವತಿಯ ವರಪುತ್ರ ಎಂದರೆ ಅತಿಶಯೋಕ್ತಿಯಾಗಲಾರದು.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬವರ್ಗಕ್ಕೆ, ಅವರ ಅಭಿಮಾನಿ ಬಳಗಕ್ಕೆ, ಆಪ್ತರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸಚಿವರು ಸಂತಾಪ ವ್ಯಕ್ತಪಡಿಸಿದ್ದಾರೆ.