ದಕ್ಷಿಣ ಕನ್ನಡ: ವಿಧಾನಸಭಾ ಚುನಾವಣೆಗೆ ಕೇವಲ 4 ದಿನ ಬಾಕಿ ಇರುವಾಗಲೇ ಎಲ್ಲಾ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ.ಕಾಂಗ್ರೆಸ್ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಅಭ್ಯರ್ಥಿಗಳ ಪರವಾಗಿ ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ.
ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕರ್ನಾಟಕ ರಾಜ್ಯದಲ್ಲಿ ಎರಡನೇ ಸುತ್ತಿನ ಮತಪ್ರಚಾರ ನಡೆಸಲಿದ್ದು, ಕರ್ನಾಟಕದ ಚಿಕಮಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಶನಿವಾರ ಬೆಳಗ್ಗೆ 7 ಗಂಟೆಗೆ ಲಕ್ನೋ ವಾಯುನೆಲೆಯಿಂದ ಹೊರಟು10 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ 10.30ಕ್ಕೆ ಚಿಕಮಗಳೂರು ತಲುಪಲಿದ್ದು ಬಿಜೆಪಿ ಅಭ್ಯರ್ಥಿ ಡಿ.ಎನ್ ಜೀವರಾಜ್ ಪರ ಮತಯಾಚನೆ ಮಾಡಲಿದ್ದಾರೆ.ಬಳಿಕ 12 ಗಂಟೆಗೆ ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಪರ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.
ಅಲ್ಲಿಂದ 1 ಗಂಟೆಗೆ ಕಾರ್ಕಳ ತಲುಪಲಿದ್ದು ಅನಂತಶಯನದಿಂದ ಕಾರ್ಕಳದ ಸ್ಟೇಟ್ ಬ್ಯಾಂಕ್ ವರೆಗೆ ಭರ್ಜರಿ ರೋಡ್ ಶೋ ನಲ್ಲಿ ಭಾಗವಹಿಸಿ ಸುನಿಲ್ ಕುಮಾರ್ ಪರ ಮತಯಾಚಿಸಲಿದ್ದಾರೆ. ನಂತರ 3 ಗಂಟೆಗೆ ಭಟ್ಕಳದಲ್ಲಿ ಅಭ್ಯರ್ಥಿ ಸುನಿಲ್ ನಾಯ್ಕ್ ಪರ ಹಾಗೂ 5 ಗಂಟೆಗೆ ಬಂಟ್ವಾಳದಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಮತಯಾಚನೆ ನಡೆಸಲಿದ್ದಾರೆ
ಯೋಗಿ ಆದಿತ್ಯನಾಥ್ ಆಗಮನದಿಂದ ಬಿಜೆಪಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿ ಗೆಲುವಿನ ಉತ್ಸಾಹ ಹೆಚ್ಚಿದ್ದು ಸಾರ್ವಜನಿಕರು ಕೂಡ ಯೋಗಿಯನ್ನು ನೋಡುವ ತವಕದಲ್ಲಿದ್ದಾರೆ.