ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಲ್ಲಿ ಬಂಧಿತರಾಗಿದ್ದ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕೆ.ಆರ್.ಪುರ ತಹಶೀಲ್ದಾರ್ ಅಜಿತ್ಕುಮಾರ್ ರೈಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಲಯ ಸೋಮವಾರ ಷರತ್ತು ಬದ್ಧ ಜಾಮೀನು ನೀಡಿದೆ. ಅಜಿತ್ಕುಮಾರ್ ಪರ ಹಿರಿಯ ವಕೀಲ ಶ್ಯಾಮ್ಸುಂದರ್ ವಾದ ಮಂಡಿಸಿದರು. 5 ಲಕ್ಷ ರು. ಮೊತ್ತದ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು ಹಾಗೂ ವಿಚಾರಣೆ ವೇಳೆ ಸಹಕರಿಸಬೇಕು, ಸಾಕ್ಷ್ಯ ನಾಶ ಮಾಡದಿರುವುದು ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಜೂ.28ರಂದು ಅಜಿತ್ಕುಮಾರ್ ರೈ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆರೋಪಿಗೆ ಸೇರಿದ 11 ಸ್ಥಳಗಳ ಮೇಲೆ ದಾಳಿ ನಡೆಸಿ 500ರ ಮುಖಬೆಲೆಯ 40 ಲಕ್ಷ ನಗದು ಸೇರಿ ಒಟ್ಟು 1.90 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು. ಅಲ್ಲದೇ ಬೇನಾಮಿ ಹೆಸರಲ್ಲಿ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜೂ.29ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಅಜಿತ್ ಕುಮಾರ್ ರೈ ಬಳಿ ಐಷಾರಾಮಿ ಕಾರುಗಳು ಇದ್ದು, ಎರಡೂವರೆ ಕೋಟಿ ರು. ಮೌಲ್ಯದ ಲ್ಯಾಂಡ್ಕ್ರೂಷರ್, ನಾಲ್ಕು ಫಾರ್ಚೂನರ್ ಮತ್ತು ನಾಲ್ಕು ಥಾರ್ ವಾಹನಗಳು ಪತ್ತೆಯಾಗಿದ್ದವು.






