ಬೆಂಗಳೂರು: ಬಡತನ ರೇಖೆಗಿಂತ ಕೆಳಗಿನ ಪಡಿತರ ಕಾರ್ಡ್ ಹೊಂದಿ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿ ಪಡೆಯಲು ಮುಂದಾಗಿದ್ದ ಜನರನ್ನು ಸರ್ಕಾರ ತೆಡೆಹಿಡಿದಿದೆ. ಅರ್ಹತೆ ಇಲ್ಲದಿದ್ದರೂ ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯುವ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದ ವರ್ಗ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿ ಸರ್ಕಾರಿ ಯೋಜನೆಗಳ ಫಲಾನುಭವಿಯಾಗಲು ಹೊರಟಿದ್ದ ನಾಗರಿಕರ ಮೇಲೆ ಆರೋಗ್ಯ ಇಲಾಖೆಯು ಕಣ್ಣಿಟ್ಟಿದೆ.
ವೈಟ್ ಬೋರ್ಡ್ ಕಾರು, ನಿಗದಿತ ವಾರ್ಷಿಕ ಆದಾಯ, ಸರ್ಕಾರಿ ಉದ್ಯೋಗ, ನಿಗದಿತ ಜಮೀನು, ಹೀಗೆ ಒಟ್ಟು ಆರು ಮಾನದಂಡಗಳನ್ನು ಬಿಪಿಎಲ್ ಕಾರ್ಡ್ನ ಅಳತೆ ಮಾನದಂಡಗಳಾಗಿರಿಸಿವೆ. ಈ ಮೊದಲು ಬಿಪಿಎಲ್ ಕಾರ್ಡ್ ಪಡೆದಿದ್ದು, ಈಗ ಅಂಥ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದರೆ, ಆ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತದೆ. ಆಹಾರ ಇಲಾಖೆಯು ಈಗಾಗಲೇ ಸರ್ವೇ ನಡೆಸಿ 35 ಸಾವಿರಕ್ಕೂ ಹೆಚ್ಚು ಕಾರ್ಡ್ಗಳನ್ನು ರದ್ದುಗೊಳಿಸಿ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಶಾಕ್ ನೀಡಿದೆ.
ಮರಣ ಹೊಂದಿದ 4.55 ಲಕ್ಷ ಜನರ ಹೆಸರನ್ನು ಕಡಿತಗೊಳಿಸುವ ಮೂಲಕ ಸರ್ಕಾರಕ್ಕೆ 6 ರಿಂದ 7 ಕೋಟಿ ರೂ. ಉಳಿತಾಯವಾಗಿದೆ. ಕೇವಲ ರದ್ದತಿಯ ಕ್ರಮವನ್ನು ಮಾತ್ರ ಕೈಗೊಳ್ಳದೆ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವ ಮೂಲಕ ಅಕ್ರಮವಾಗಿ ಕಾರ್ಡ್ ಹೊಂದುವವರ ವಿರುದ್ಧದ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈ ಕುರಿತು ಈಗಾಗಲೇ ಒಂದು ಹಂತದ ಸರ್ವೆ ನಡೆದಿದ್ದು 8 ಕೋಟಿ ರೂ.ಗಿಂತಲೂ ಅಧಿಕ ಮೊತ್ತ ಸಂಗ್ರಹವಾಗಿದೆ. ನಿಯಮ ಉಲ್ಲಂಘಿಸಿದವರಲ್ಲಿ ಬಹುತೇಕರು ಸರ್ಕಾರಿ ಉದ್ಯೋಗಿಗಳು ಮತ್ತು ವೈಟ್ ಬೋರ್ಡ್ ವಾಹನ ಉಳ್ಳವರಾಗಿದ್ದರು. ರಾಜ್ಯದಲ್ಲಿ ನಿಯಮ ಉಲ್ಲಂಘನೆ ಹೆಚ್ಚಾಗಿರುವುದರಿಂದ ಆದಾಯ ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆಗೂ ಮಾಹಿತಿ ಸಂಗ್ರಹಿಸಿ ಎಂದು ಆಹಾರ ಇಲಾಖೆ ಮನವಿ ಮಾಡಿದೆ
ಹೊಸ ಅರ್ಜಿ ಸಲ್ಲಿಸಲು ಇಲ್ಲ ಅನುಮತಿ:
ಸದ್ಯಕ್ಕೆ ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿಲ್ಲ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಸದ್ಯದಲ್ಲೇ ಹೇಳುತ್ತೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಹೆಚ್ ಮುನಿಯಪ್ಪ ತಿಳಿಸಿದ್ದಾರೆ. ಎಪಿಎಲ್ ಹಾಗೂ ಬಿಪಿಎಲ್ ಎರಡು ರೀತಿಯ ರೆಷನ್ ಕಾರ್ಡ್ ಅರ್ಜಿಗಳಿಗೂ ತಡೆಹಿಡಿಯಲಾಗಿದೆ.







