ಪಡುಬಿದ್ರೆ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಅಜೆಕಾರು ನಿವಾಸಿ ಅಶ್ವತ್ ಶೆಟ್ಟಿ (32) ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಪಡುಬಿದ್ರೆ ಸಮೀಪದ ನಂದಿಕೂರು ಎಂಬಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಬೊಂಡುಕುಮೇರಿ ನಿವಾಸಿಯಾಗಿದ್ದ ಅಶ್ವತ್ ಶೆಟ್ಟಿ ತನ್ನ ಹೊಸ ಬೈಕಿನ ಸರ್ವೀಸ್ ಮಾಡಿಸಲು ಮಂಗಳೂರಿಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಶ್ವತ್ ಶೆಟ್ಟಿ ತನ್ನ ಬೈಕಿನಲ್ಲಿ ಪಡುಬಿದ್ರೆ ಮಾರ್ಗವಾಗಿ ನಂದಿಕೂರು ಎಂಬಲ್ಲಿ ಹೋಗುತ್ತಿದ್ದ ವೇಳೆ ಮುಂದಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ ಡಿಕ್ಕಿಯಾಗಿದೆ. ಈ ಭೀಕರ ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದ್ದು ಗಂಭೀರವಾಗಿ ಗಾಯಗೊಂಡ ಅಶ್ವಥ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



