ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯಿಂದ ಸಾಹಿತಿ ದಿವಂಗತ ಯಶವಂತಿ ಸುವರ್ಣ ಇವರ ಸಂಸ್ಮರಣೆ ಹಾಗೂ ಕೃತಿ ವಿಮರ್ಶೆ ಕಾರ್ಯಕ್ರಮವು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿತು.
ಸುಲೋಚನಾ ತಿಲಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಶವಂತಿ ಸುವರ್ಣ ಅವರು ಸಾಮಾಜಿಕ, ರಾಜಕೀಯ,ಶೈಕ್ಷಣಿಕ ಹಾಗೂ ಸಾಹಿತ್ಯಿಕ ರಂಗದಲ್ಲಿ ಕ್ರಿಯಾಶೀಲರಾಗಿದ್ದು ತಮ್ಮ ಸ್ತ್ರಿಪರ ಚಿಂತನೆಯಿಂದ ಜನಪ್ರಿಯರಾಗಿದ್ದರು ಎಂದರು.

ಯಶವಂತಿ ಸುವರ್ಣರ “ದಾರಿ” ಕಥಾ ಸಂಕಲನದ ವಿಮರ್ಶೆ ಮಾಡಿದ ಶ್ಯಾಮಲಾ ಕುಮಾರಿ ಬೇವಿಂಜೆ ಇವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಯಶವಂತಿಯವರಂತಹ ಹೆಣ್ಣು ಮಗಳು ಸಮಾಜದ ಓರೆ ಕೋರೆಗಳು ರಾಜಕೀಯ ತಂತ್ರಗಳು, ಅಧಿಕಾರಶಾಹಿ, ಕಾಮ ಪ್ರೇಮಗಳ ಕುರಿತು ದಿಟ್ಟವಾಗಿ ತೆರೆದುಕೊಳ್ಳುವುದು ಅಚ್ಚರಿ ಮೂಡಿಸಿತು ಎಂದರು.

ಅವರ ತುಳು ಕೃತಿಗಳ ಬಗ್ಗೆ ಮಾತನಾಡಿದ ಡಾ.ಸುಮತಿ ಪಿ, ಯಶವಂತಿ ಸುವರ್ಣರಿಂದ ತುಳುನಾಡಿನ ಪರಂಪರೆ ಮತ್ತು ದೈವಗಳ ಕುರಿತು ಅಧ್ಯಯನ ಯೋಗ್ಯ ರಚನೆ ಆಗಿದೆ ಎಂದರು. ಅವರ ಆತ್ಮಕತೆ ಪಶ್ಚಿಮ ಕ್ಕೆ ವಾಲಿದ ಸೂರ್ಯದ ಕುರಿತು ಮಾತನಾಡಿದ ಸಾವಿತ್ರಿ ಮನೋಹರ್ ಲೇಖಕಿ ತನ್ನ ಜೀವನವನ್ನು ಎದುರಿಸಿದ ರೀತಿ, ಜೀವನಾನುಭೂತಿಯ ಸಂಪ್ರೀತಿ ಪ್ರಕೃತಿಯೊಂದಿಗಿನ ಸಾಹಚರ್ಯ ಮುಂತಾದ ವಿಚಾರಗಳ ಕುರಿತು ಬೆಳಕ ಚೆಲ್ಲಿದರು.ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆಯವರು ನುಡಿದಂತೆ ನಡೆದು ಸಮಾಜಕ್ಕೆ ಮಾದರಿಯಾದ ಯಶವಂತಿ ಸುವರ್ಣರ ಎಲ್ಲಾ ಕೃತಿಗಳು 60ರ ದಶಕದಲ್ಲಿ ಸ್ತ್ರೀ ಸಂವೇದನೆಗೆ ಹಿಡಿದ ಕೈಕನ್ನಡಿಯಂತಿದೆ ಎಂದರು.
ಗಾಯತ್ರಿ ವಿಜಯೇಂದ್ರ ಸ್ವಾಗತಿಸಿ ,ಶೈಲಜ ಹೆಗ್ಡೆ ವಂದಿಸಿದರು . ಕಾರ್ಯದರ್ಶಿ ಮಾಲತಿ.ಜಿ.ಪೈ ನಿರೂಪಿಸಿದರು.


