ಹೆಬ್ರಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರದ ಪೆಟ್ರೋಲ್ ಬಂಕಿನಲ್ಲಿ ಮಲಗಿದ್ದ ಇಬ್ಬರ ಮೇಲೆ ಟಿಪ್ಪರ್ ಹರಿದು ಓರ್ವ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ಶುಕ್ರವಾರ ಮುಂಜಾನೆ 6 ಗಂಟೆಗೆ ಸಂಭವಿಸಿದೆ.
ಸಾಗರ ತಾಲೂಕಿನ ಶಿವರಾಜ್(38) ಎಂಬವರು ಮೃತಪಟ್ಟ ವ್ಯಕ್ತಿ ,ಮಹೇಂದ್ರ ಎಂಬವರು ಈ ದುರ್ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಾಗರ ಕಡೆಯಿಂದ ಬಾಳೆಕಾಯಿ ತುಂಬಿಸಿಕೊಂಡು ಬಂದಿದ್ದ ಶಿವರಾಜ್ ಹಾಗೂ ಮಹೇಂದ್ರ ರಾತ್ರಿ ವೇಳೆ ಸೋಮೇಶ್ವರದ ಪೆಟ್ರೋಲ್ ಬಂಕ್ ನಲ್ಲಿ ಟಾಟಾ ಏಸ್ ವಾಹನವನ್ನು ನಿಲ್ಲಿಸಿ ವಾಹನದ ಮುಂದೆ ಮಲಗಿದ್ದರು. ಮುಂಜಾನೆ6 ಗಂಟೆ ಸುಮಾರಿಗೆ ಟಿಪ್ಪರ್ ಚಾಲಕನೋರ್ವ ಡೀಸೆಲ್ ತುಂಬಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಲಗಿದ್ದವರ ಮೇಲೆಯೇ ಚಲಾಯಿಸಿಕೊಂಡು ಹೋದ ಪರಿಣಾಮ ಶಿವರಾಜ್ ಸ್ಥಳದಲ್ಲೇ ಮೃತಪಟ್ಟರೆ, ಮಹೇಂದ್ರ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಟಿಪ್ಪರ್ ಚಾಲಕ ಮೊಬೈಲ್ ನಲ್ಲಿ ಮಾತನಾಡಿಕೊಂಡು ಟಿಪ್ಪರ್ ಚಲಾಯಿಸಿರುವುದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದ ಭೀಕರ ದೃಶ್ಯ ಪೆಟ್ರೋಲ್ ಬಂಕಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನಾಸ್ಥಳಕ್ಕೆ ಹೆಬ್ರಿ ಪೊಲೀಸರು ಭೇಟಿ ನೀಡಿದ್ದು,ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

















