ಕಾರ್ಕಳ: ಸಂಘಟನಾತ್ಮಕ ವಿಚಾರಗಳು, ಸಹಕಾರಿ ಕಾಯಿದೆ ಮತ್ತು ಆಡಳಿತ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಸಹಕಾರ ಭಾರತಿ ಅಭ್ಯಾಸ ವರ್ಗದಿಂದ ಸಾಧ್ಯವಾಗಿದೆ ಎಂದು ಕಾರ್ಕಳ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ರಾಘವ ನಾಯ್ಕ್ ಹೇಳಿದರು.
ಅವರು ಫೆ.19ರಂದು ಲ್ಯಾಂಪ್ಸ್ ಸೊಸೈಟಿ ಸಭಾಭವನದಲ್ಲಿ ನಡೆದ ಕಾರ್ಕಳ ತಾಲೂಕು ಸಹಕಾರ ಭಾರತಿ ಅಭ್ಯಾಸ ವರ್ಗದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ಜೀವನದಲ್ಲಿ ಒಬ್ಬರಿಗೊಬ್ಬರು ಕಲಿಯುವುದು ತುಂಬಾ ಇರುತ್ತದೆ, ಪರಸ್ಪರ ಸಹಕಾರದೊಂದಿಗೆ ಸಹಬಾಳ್ವೆ ನಡೆಸುವುದೇ ಸಹಕಾರಿ ತತ್ವವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಹಕಾರ ಭಾರತಿಯ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಮಾತನಾಡಿ, ಹಕಾರದಿಂದ ಸಮೃದ್ಧಿ ಎನ್ನುವ ಘೋಷ ವಾಕ್ಯದೊಂದಿಗೆ, ಸಹಕಾರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕವಾದ ಕೇಂದ್ರ ಸಚಿವಾಲಯವನ್ನು ತೆರೆದು ರೈತರಿಗೆ ಹಾಗೂ ಹೈನುಗಾರರಿಗೆ ತುಂಬಾ ಅನುಕೂಲವಾಗಿದೆ ಎಂದರು. ರಾಜ್ಯದಲ್ಲಿ 52 ವಿವಿಧ ಆರ್ಥಿಕ ಚಟುವಟಿಕೆಗಳನ್ನು ನಡೆಸುವ, ಸುಮಾರು 45 ಸಾವಿರದಷ್ಟು ಸಹಕಾರಿ ಸಂಸ್ಥೆಗಳಿದ್ದು, ಅದರಲ್ಲಿ 16,000 ಹಾಲು ಉತ್ಪಾದಕ ಸಹಕಾರ ಸಂಘಗಳು ಗ್ರಾಮೀಣ ಭಾಗದ ಜನರ ಜೀವಾಳವಾಗಿದೆ ಎಂದರು. ಹಾಲಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹೈನುಗಾರರು ಸಂಘಗಳಿಗೆ ಪ್ರತೀದಿನ ಪೂರೈಸುವ ಹಾಲಿಗೆ ಹೆಚ್ಚಿನ ದರ, ಪಶು ಆಹಾರಕ್ಕೆ ಸಬ್ಸಿಡಿ, ಕಳೆದ ಆರು ತಿಂಗಳಿನಿAದ ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನದ ಬಿಡುಗಡೆ,ರಾಜ್ಯದಲ್ಲಿ ಪಶುವೈದ್ಯರ ಕೊರತೆಯನ್ನು ನೀಗಿಸಿ ಹೊಸ ಪಶು ವೈದ್ಯರ ನೇಮಕಾತಿಯ ಬಗ್ಗೆ ಸಹಕಾರ ಭಾರತಿಯು ಹೈನುಗಾರರ ಪರವಾಗಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಿದ್ದು, ಸರಕಾರೇತರ, ರಾಷ್ಟ್ರಮಟ್ಟದ ಏಕೈಕ ಸಹಕಾರಿ ಸಂಘಟನೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಭಾರತಿ ಕಾರ್ಕಳ ತಾಲೂಕು ಅಧ್ಯಕ್ಷ ಹರೀಶ್ ಕಲ್ಯಾ ವಹಿಸಿದ್ದರು.
ಬಳಿಕ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖರಾದ ಮೋಹನ್ ಕುಂಬಳೇಕರ್ ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಸಹಕಾರಿ ಕಾಯ್ದೆ ಮತ್ತು ಆಡಳಿತ ನಿರ್ವಹಣೆಯ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಮಂಗಳೂರಿನ ಅಧೀಕ್ಷಕ ಎನ್. ಜೆ. ಗೋಪಾಲ್ ರವರು ಮಾಹಿತಿ ಮಾರ್ಗದರ್ಶನ ನೀಡಿದರು. ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿಯವರು ವಂದಿಸಿದರು.
ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದಲ್ಲಿ ಸಹಕಾರ ಭಾರತಿಯ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿಯವರು ಮಾತನಾಡಿ, ಸಹಕಾರಿ ಕ್ಷೇತ್ರ ಜನಜೀವನದ ಅವಿಭಾಜ್ಯ ಅಂಗವಾಗಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿಯೂ ಸಹಕಾರ ಭಾರತೀಯು ಸಕ್ರಿಯವಾಗಿದ್ದು, ಸಂಘಟನಾತ್ಮಕವಾಗಿ, ಆಂದೋಲನಾತ್ಮಕವಾಗಿ, ಪ್ರಾತಿನಿಧ್ಯಾತ್ಮಕವಾಗಿ ಮತ್ತು ರಚನಾತ್ಮಕವಾಗಿ ವರ್ಷವಿಡೀ ಕ್ರಿಯಾಶೀಲತೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಸಹಕಾರ ಭಾರತಿಯ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕ ಹಾಗೂ ನ್ಯಾಯವಾದಿ ಮಂಜುನಾಥ, ಸಹಕಾರ ಭಾರತಿ ಉಡುಪಿ ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕ ಕನ್ನಾರು ಕಮಲಾಕ್ಷ ಹೆಬ್ಬಾರ್ ಉಪಸ್ಥಿತರಿದ್ದರು.
ಲ್ಯಾಂಪ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ದಿವಾಕರ ಶೆಟ್ಟಿಯವರು ಮಾಹಿತಿ ಕಾರ್ಯಾಗಾರ ಸಂಯೋಜಿಸಿದರು. ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನೀರೆ ರವೀಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


