ಹೆಬ್ರಿ : ಸ್ಕೂಟರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರಿಣಿಯಾಗಿದ್ದ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹೆಬ್ರಿ ತಾಲೂಕಿನ ಇಕ್ಕೋಡ್ಲು ಎಂಬಲ್ಲಿ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿನಿ ಜೆಸ್ವಿನಿ ಹರ್ಷವರ್ಧನ್ ರೆಡ್ಡಿ(23) ಎಂಬಾಕೆ ಮೃತಪಟ್ಟ ದುರ್ದೈವಿ. ಜೆಸ್ವಿನಿಯವರು ಸೋಮವಾರ ಮಧ್ಯಾಹ್ನ ತಮ್ಮ ಸ್ಕೂಟರಿನಲ್ಲಿ ಹೆಬ್ರಿ ಕಡೆಯಿಂದ ಸೋಮೇಶ್ವರ ಕಡೆಗೆ ಹೋಗುತ್ತಿದ್ದಾಗ ಇಕ್ಕೋಡ್ಲು ಬಳಿ ಸೋಮೇಶ್ವರ ಕಡೆಯಿಂದ ಹೆಬ್ರಿ ಕಡೆಗೆ ಅತೀವೇಗವಾಗಿ ಬರುತ್ತಿದ್ದ ಕಾರು ಜೆಸ್ವಿನಿಯವರ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಜೆಸ್ವಿನಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.