ಕಾರ್ಕಳ: ಬಿಸಿಲಿನ ಝಳಕ್ಕೆ ಜಲಮೂಲ ಬರಿದಾಗಿದ್ದು, ಪುರಸಭಾ ವ್ಯಾಪ್ತಿಯ ಎಲ್ಲಾ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕೆಲವು ವಾರ್ಡಗಳಲ್ಲಿ ದಿನ ಬಳಕೆ ಹಾಗೂ ಕುಡಿಯುವ ನೀರಿಗೂ ಕೊರತೆ ಉಂಟಾಗಿದೆ.ಈ ಸಂದಿಗ್ಧ ಸ್ಥಿತಿಯಲ್ಲಿ ಕಾಮಗಾರಿಗಳಿಗೆ ರಾಮ ಸಮುದ್ರದ ನೀರನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ.ಅಕ್ರಮ ನೀರಿನ ಬಳಕೆಯ ವಿರುದ್ಧ ಕ್ರಮಕೈಗೊಳ್ಳಬೇಕಾದ ಪುರಸಭೆ ಆಡಳಿತ ಮೌನಕ್ಕೆ ಜಾರಿದೆ ಎಂದು ಪುರಸಭಾ ಸದಸ್ಯ ಶುಭದ ರಾವ್ ಆರೋಪಿಸಿದ್ದಾರೆ.
ಗುತ್ತಿಗೆದಾರನೊಬ್ಬ ಹೊರ ಜಿಲ್ಲೆಯ ಕಾಮಗಾರಿಯನ್ನು ವಹಿಸಿಕೊಂಡು ರಾಮಸಮುದ್ರದ ಬಳಿ ತಾತ್ಕಾಲಿಕ ಪ್ಲಾಂಟ್ ನಿರ್ಮಿಸಿ ಕಾಮಗಾರಿಗೆ ಅಕ್ರಮವಾಗಿ ಪಂಪ್ ಅಳವಡಿಸಿ ತ ಯಥೇಚ್ಛವಾಗಿ ನೀರು ಬಳಸುವುದನ್ನು ತಕ್ಷಣ ನಿಲ್ಲಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವಂತೆ ಜಿಲ್ಲಾದಿಕಾರಿಗೆ ಶುಭದರಾವ್ ಆಗ್ರಹಿಸಿದ್ದಾರೆ.
ಈ ಅಕ್ರಮ ಕಾಮಗಾರಿಯ ಬಗ್ಗೆ ಜಲಮಂಡಲಿಯ ಅಧಿಕಾರಿಗಳು, ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ಸಾರ್ವಜನಿಕರು ಎಷ್ಟೇ ದೂರು ಸಲ್ಲಿಸಿದರೂ ಅವರ ನಿರ್ಲಕ್ಷ್ಯ ಮತ್ತು ಮೌನ ಅನೇಕ ಸಂಶಯಗಳಿಗೆ ಅವಕಾಶ ಮಾಡಿಕೊಟ್ಟಿದೆ. ಪುರಸಭಾ ವ್ಯಾಪ್ತಿಯ ನೀರಿನ ಸಮಸ್ಯೆಯ ಗಂಬೀರತೆಯ ಬಗ್ಗೆ ಸಂಪುರ್ಣ ಮಾಹಿತಿ ಇದ್ದರೂ ಅಕ್ರಮ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕೆಂದು ಶುಭದ ರಾವ್ ಮನವಿಯಲ್ಲಿ ಆಗ್ರಹಿಸಿದ್ದಾರೆ.
