Share this news

ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ 2500 ಎಕರೆಯ ಭೂ ಹಗರಣ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಸೋಲಿನಿಂದ ಕಂಗೆಟ್ಟ ರಾಷ್ಟ್ರೀಯ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷವು ಕರ್ನಾಟಕ ವಿಧಾನಸಭೆಗೆ ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸುಮಾರು ಆರು ತಿಂಗಳ ಕಾಲ ಹುಡುಕಾಟ ನಡೆಸಿ ಸಮರ್ಥರು ಸಿಗದ ಕಾರಣ ಹೊಂದಾಣಿಕೆ ಗಿರಾಕಿ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಿದೆ.ಸದನವು ಸಮರ್ಥ ವಿರೋಧ ಪಕ್ಷದ ನಾಯಕರನ್ನು ಕಂಡಿದ್ದು, ಇಂದು ಸಮರ್ಥ ವಿರೋಧ ಪಕ್ಷದ ನಾಯಕರಿಲ್ಲದೇ ಸೊರಗುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ತೆಗಳುವುದನ್ನೇ ಕಾಯಕ ಮಾಡಿಕೊಂಡಿರುವ ಆರ್.ಅಶೋಕ್ ಅವರು ತಾವು ಪಿಯುಸಿ ವ್ಯಾಸಂಗ ಮಾಡುವಾಗ ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿರುವುದಾಗಿ ಹೇಳುತ್ತಾರೆ. ಅಪ್ರಾಪ್ತರನ್ನು ಜೈಲಿನಲ್ಲಿ ಇಡಲು ಕಾನೂನಿನಲ್ಲಿ ಅವಕಾಶವಿತ್ತೇ ಎಂಬುದನ್ನು ರಾಜ್ಯದ ಗೃಹ ಖಾತೆಯ ಮಾಜಿ ಸಚಿವ ಆರ್.ಅಶೋಕ್ ಅವರೇ ತಿಳಿಸಬೇಕು. ಇವರ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಇಂದಿಗೂ ವಿಚಾರಣೆಗೆ ಬಾಕಿ ಇದ್ದು ಯಾವ ಕಾರಣಕ್ಕೆ ಪ್ರಕರಣ ಬಾಕಿ ಇದೆ ಎಂದು ವಿರೋಧ ಪಕ್ಷದ ನಾಯಕರು ಸಾರ್ವಜನಿಕವಾಗಿ ಉತ್ತರಿಸಬೇಕು. ತಮ್ಮ ಚುನಾವಣಾ ಪ್ರಮಾಣ ಪಾತ್ರದಲ್ಲಿ ಬಾಕಿ ಇರುವ ಅಪರಾಧ ಪ್ರಕರಣಗಳ ಕುರಿತು ಅಪೂರ್ಣ ಮಾಹಿತಿ ನೀಡಿರುವ ಮಾನ್ಯ ವಿರೋಧ ಪಕ್ಷದ ನಾಯಕರು, ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಕುರಿತು ಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಹೇಳಿದರು. ಆರ್.ಅಶೋಕ್ ರವರು ಹಿಂದಿನ ಸಾರಿಗೆ ಸಚಿವರಾಗಿ ಬಸ್ ಖರೀದಿಯಲ್ಲಿ ನಡೆಸಿರುವ ಆರೋಪಗಳ ಮೇಲೆ ತನಿಖೆ ಆಗಬೇಕಾಗಿರುತ್ತದೆ. 143 ಟಾಟಾ ಮಾರ್ಕೋಪೋಲೋ ಬಸ್ ಖರೀದಿಯಲ್ಲಿ ಅವ್ಯವಹಾರದ ಆರೋಪಗಳಿದ್ದು, ಇದರ ಮೇಲೆ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಬೇಕು. ನರ್ಮ್ ಯೋಜನೆಯ ಅಡಿಯಲ್ಲಿ ಬಸ್ ಖರೀದಿ ಮತ್ತು ಬಸ್ ನಿಲ್ದಾಣಗಳ ನಿರ್ಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿರುವ ಆರೋಪಗಳಿದ್ದು, ಸಾರ್ವಜನಿಕ ಸಂಪತ್ತಿನ ಸಂರಕ್ಷಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಇದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಆರೋಪ ರಹಿತವಾದ ಒಬ್ಬ ಶಾಸಕರನ್ನು ಕರ್ನಾಟಕ ವಿಧಾನಸಭೆಗೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಲು ವಿಫಲವಾಗಿರುವ ಕರ್ನಾಟಕದ ಭಾರತೀಯ ಜನತಾ ಪಕ್ಷವು ಅನಿವಾರ್ಯವಾಗಿ ಸಾಂದರ್ಭಿಕವಾಗಿ ಇಂತಹ ಆರೋಪಿತರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವುದರ ಮೂಲಕ ಅಪಹಾಸ್ಯಕ್ಕೆ ಗುರಿಯಾಗಿರುತ್ತದೆ. ಇತಿಹಾಸದ ಕರ್ನಾಟಕದ ವಿಧಾನಸಭೆಗೆ ಒಬ್ಬ ಸಮರ್ಥ ವಿರೋಧ ಪಕ್ಷದ ನಾಯಕರನ್ನು ನೀಡಲು ವಿಫಲವಾಗಿರುವ ಭಾರತೀಯ ಜನತಾ ಪಕ್ಷವು ಸಾರ್ವಜನಿಕವಾಗಿ ಕರ್ನಾಟಕ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

 

 

 

                        

                          

 

 

 

 

 

                        

                          

 

 

 

 

Leave a Reply

Your email address will not be published. Required fields are marked *