ಕಾರ್ಕಳ : ಚಲಿಸುತ್ತಿದ್ದ ಬೈಕಿಗೆ ಹಠಾತ್ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಪಲ್ಟಿಯಾಗಿ ನವವಿವಾಹಿತೆ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಹೊಸ್ಮಾರಿನ ಸೇತುವೆ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.
ಈದು ಗ್ರಾಮದ ಕರೆಂಬಾಲು ನಿವಾಸಿ ನವವಿವಾಹಿತ ವಿಶಾಲ್ ಅವರ ಪತ್ನಿ ನೀಕ್ಷಾ (26) ಎಂಬವರೇ ಮೃತಪಟ್ಟ ನವವಿವಾಹಿತೆ. ವಿಶಾಲ್ ಹಾಗೂ ನೀಕ್ಷಾ ಶುಕ್ರವಾರ ಸಂಜೆ ತಮ್ಮ ಬೈಕಿನಲ್ಲಿ ಹೊಸ್ಮಾರು ಸೇತುವೆ ಬಳಿ ಹೋಗುತ್ತಿದ್ದಾಗ ಬೀದಿನಾಯಿ ಏಕಾಏಕಿ ಅಡ್ಡ ಬಂದಿದೆ. ಸಾಧಾರಣ ವೇಗದಲ್ಲಿದ್ದ ಬೈಕ್ ಸವಾರ ವಿಶಾಲ್ ಬೈಕನ್ನು ನಿಯಂತ್ರಿಸಲಾಗದೇ ಹಿಂಬದಿಯಲ್ಲಿ ಕುಳಿತಿದ್ದ ತನ್ನ ಪತ್ನಿ ನೀಕ್ಷಾ ಸಹಿತ ರಸ್ತೆಗೆ ಬಿದ್ದ ಪರಿಣಾಮ ನೀಕ್ಷಾ ಅವರ ತಲೆಗೆ ಗಂಭೀರ ಗಾಯಗಳಾಗಿ ಅವರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಕಳೆದ ಎರಡು ತಿಂಗಳ ಹಿಂದಷ್ಟೇ ನೀಕ್ಷಾ ಅವರಿಗೆ ವಿಶಾಲ್ ಜತೆ ವಿವಾಹವಾಗಿತ್ತು.ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿದ್ದ ನೀಕ್ಷಾ ಅವರನ್ನು ಜವರಾಯ ಶ್ವಾನದ ರೂಪದಲ್ಲಿ ಕಾಡಿ ಬಲಿಪಡೆದಿದ್ದು ನಿಜಕ್ಕೂ ದುರಂತ.ಮಾತ್ರವಲ್ಲದೇ ನೀಕ್ಷಾ ಅವರ ತಂದೆ ಪ್ರೀತಿ ಟೈಮ್ಸ್ ಸೆಂಟರ್ ಮಾಲಕ ಪ್ರಕಾಶ್ ಅವರು 9 ತಿಂಗಳ ಹಿಂದೆಯಷ್ಟೇ ವಿಧಿವಶರಾಗಿದ್ದು ಅವರ ಕುಟುಂಬಕ್ಕೆ ನೀಕ್ಷಾ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ.
ಈ ಅಪಘಾತದ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
