ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್ ತಣ್ಣೀರುಬಾವಿ MRPL ತೈಲ ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ನೌಕರರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿದ್ದಾರೆ.
ಶನಿವಾರ ಮುಂಜಾನೆ ಈ ದುರ್ಘಟನೆ ಸಂಭವಿಸಿದ್ದು,ಉತ್ತರ ಭಾರತ ಮೂಲದ ದೀಪಚಂದ್ರ ಭಾರ್ತೀಯಾ, ಬಿಜಿಲ್ ಪ್ರಸಾದ್ ಮೃತಪಟ್ಟ ಸಿಬ್ಬಂದಿಗಳು.
ತೈಲ ಸಂಸ್ಕರಣಾ ಘಟಕದ ಮೂವ್ಮೆಂಟ್ ವಿಭಾಗದಲ್ಲಿ ಈ ದುರ್ಘಟನೆ ನಡೆದಿದೆ. ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಎಂಎಂಎಸ್ ವಿಭಾಗದ ಟ್ಯಾಂಕ್ ಮೇಲ್ಚಾವಣಿಗೆ ತೆರಳಿದ್ದಾಗ ಇಬ್ಬರು ಸಿಬ್ಬಂದಿಗಳು ಅಸ್ವಸ್ಥರಾಗಿದ್ದಾರೆ.ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರೂ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಸ್ವಸ್ಥರ ರಕ್ಷಣೆಗೆ ಮುಂದಾಗಿದ್ದ ವಿನಾಯಕ ಮೈಗೇರಿ ಎನ್ನುವವರ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿನಾಯಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ
ಘಟನೆಯ ಬಗ್ಗೆ ತನಿಖೆಗೆ ಎಂಆರ್ಪಿಎಲ್ ಆಡಳಿತ ಮಂಡಳಿ ಸಮಿತಿ ರಚನೆ ಮಾಡಿದೆ. ಗ್ರೂಪ್ ಜನರಲ್ ಮ್ಯಾನೇಜರ್ ಒಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ ಎಂದು ತಿಳಿದುಬಂದಿದೆ.