ಕಾರ್ಕಳ, ಅ.11: ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿಯಾಗಿದ್ದ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಸಮ್ಮತ ತನಿಖೆ ನಡೆಸಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳನ್ನು ಬಂಧಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಾಸಕ ವಿ ಸುನಿಲ್ ಕುಮಾರ್ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಭಿಷೇಕ್ ಆಚಾರ್ಯ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಜೊತೆಗಿನ ಪ್ರೀತಿ ವಿಷಯದಲ್ಲಿ ಹಾಗೂ ಆಕೆಯ ಸ್ನೇಹಿತರ ಕಿರುಕುಳದ ಸಂಚಿನಿಂದ ಬೇಸತ್ತು ಬೆಳ್ಮಣ್ಣಿನ ಖಾಸಗಿ ಲಾಡ್ಜ್ ನಲ್ಲಿ 07 ಪುಟಗಳ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ಬೇಸರ ಹಾಗೂ ವಿಷಾದದ ಸಂಗತಿ.
ಮೃತ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆ ಹಾಗೂ ಅದರ ಹಿಂದಿರುವ ಸಂಚಿನ ಕುರಿತು ಹಲವು ಅನುಮಾನಗಳಿದ್ದು, ಈ ರೀತಿಯ ತಂಡವು ಹಲವರಿಗೆ ವಂಚಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಅನುವು ಮಾಡಿಕೊಟ್ಟಿರುತ್ತದೆ. ಮೃತನ ಪೋಷಕರು ಹಾಗೂ ಸಂಬಂಧಿಗಳು ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದು, ಮಗನ ಅಸಹಜ ಸಾವಿನ ಕುರಿತು ನ್ಯಾಯ ಸಮ್ಮತ ತನಿಖೆಗೆ ಆಗ್ರಹಿಸಿರುತ್ತಾರೆ. ಮೃತ ಅಭಿಷೇಕ್ ಆಚಾರ್ಯ ಇವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತನ್ನ ಸಾವಿನ ಕುರಿತು ಹಾಗೂ ಆತನ ಗೆಳತಿ ಹಾಗೂ ಸ್ನೇಹಿತರಿಂದ ಆಗುತ್ತಿದ್ದ ಮಾನಸಿಕ ಕಿರುಕಳದ ಬಗ್ಗೆ ಸುದೀರ್ಘವಾಗಿ ಉಲ್ಲೇಖಿಸಿರುತ್ತಾರೆ. ಮೃತರ ಡೆತ್ ನೋಟ್ ಆಧರಿಸಿ ಅದರಲ್ಲಿ ಉಲ್ಲೇಖಿಸಿರುವ ಎಲ್ಲಾ ವ್ಯಕ್ತಿಗಳು ಸಾಕ್ಷಿ ನಾಶ ಮಾಡುವ ಮೊದಲೇ, ಕೂಡಲೇ ಬಂಧಿಸಿ ನ್ಯಾಯ ಸಮ್ಮತ, ಸಮಗ್ರ ತನಿಖೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ.
ಮೃತ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆ ಹಾಗೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ, ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಮಾಜಿ ಸಚಿವ ವಿ ಸುನಿಲ್ ಕುಮಾರ್ ಎಸ್ಪಿ ಹರಿರಾಂ ಶಂಕರ್ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.